ನವದೆಹಲಿ: ತನ್ನ ವಿರುದ್ಧ ಬಿಹಾರ ಮತ್ತು ತಮಿಳುನಾಡಿನಲ್ಲಿ ದಾಖಲಾಗಿರುವ ಎಫ್ಐಆರ್ಗಳನ್ನು ಒಟ್ಟುಗೂಡಿಸಬೇಕು ಎಂದು ಬಂಧನಕ್ಕೊಳಗಾಗಿರುವ ಯುಟ್ಯೂಬರ್ ಒಬ್ಬರು ಸಲ್ಲಿಸಿರುವ ಅರ್ಜಿ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಬಿಹಾರ, ತಮಿಳುನಾಡು ಮತ್ತು ಕೇಂದ್ರ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ನೀಡಿದೆ.
ತಮಿಳುನಾಡಿನಲ್ಲಿ ವಲಸಿಗ ಕಾರ್ಮಿಕರ ಮೇಲೆ ದಾಳಿ ನಡೆಸಲಾಗಿದೆ ಎಂದು ಬಿಂಬಿಸಲಾದ ವಿಡಿಯೊವನ್ನು ಹರಿಬಿಟ್ಟ ಆರೋಪದ ಮೇಲೆ ಮನೀಶ್ ಕಶ್ಯಪ್ ಎಂಬ ಯುಟ್ಯೂಬರ್ ಅನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಬಂಧಿಸಲಾಗಿತ್ತು.
ಎರಡು ರಾಜ್ಯಗಳಲ್ಲಿ ಐದು ಬಾರಿ ಕಾನೂನು ಪ್ರಕ್ರಿಯೆಗಳನ್ನು ಮನೀಶ್ ಅವರು ಎದುರಿಸಿದ್ದಾರೆ. ಹಾಗಾಗಿ ಎರಡೂ ರಾಜ್ಯಗಳಲ್ಲಿ ದಾಖಲಾಗಿರುವ ಎಫ್ಐಆರ್ಗಳನ್ನು ಒಟ್ಟುಗೂಡಿಸಬೇಕು ಎಂದು ಅರ್ಜಿದಾರರ ಪರ ವಕೀಲ ಸಿದ್ಧಾರ್ಥ್ ದವೆ ಅವರು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠಕ್ಕೆ ತಿಳಿಸಿದರು.
ತಮಿಳುನಾಡು ಸರ್ಕಾರದ ಪರ ಕೋರ್ಟ್ನಲ್ಲಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಮನೀಶ್ ಎಸಗಿರುವ ಲೋಪವು ಜನರ ಸಾವಿಗೆ ಕಾರಣವಾಗಿದೆ. ಹಾಗಾಗಿ ಇದು ಸರಳವಾದ ಪ್ರಕರಣವಲ್ಲ. ಈಗಾಗಲೇ ಅವರನ್ನು ಎನ್ಎಸ್ಎ ಅಡಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಎಲ್ಲಾ ಕಾರಣಗಳಿಂದ ಪ್ರತಿಕ್ರಿಯೆ ನೀಡಲು ನಮಗೆ ಸಮಯಾವಕಾಶ ಬೇಕು ಎಂದು ಕೋರ್ಟ್ಗೆ ಮನವಿ ಮಾಡಿದರು.
ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಲು ಸರ್ಕಾರಗಳಿಗೆ ಒಂದು ವಾರ ಸಮಯಾವಕಾಶವನ್ನು ಪೀಠ ನೀಡಿದೆ. ಜೊತೆಗೆ, ಅರ್ಜಿ ಕುರಿತ ಮುಂದಿನ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ನಿಗದಿಪಡಿಸಿದೆ.