ನವದೆಹಲಿ : ಕೇಂದ್ರ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯ (Union Ministry of Electronics and IT) ಎಪ್ರಿಲ್ 7, ಗುರುವಾರ 2021ರ ಐಟಿ ನಿಯಮಗಳಿಗೆ ತಿದ್ದುಪಡಿಗಳನ್ನು ಘೋಷಿಸಿದೆ. ಇದರ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುವ ಮಾಹಿತಿ ವಾಸ್ತವವೋ ಅಥವಾ ನಕಲಿಯೋ ಎಂದು ನಿರ್ಧರಿಸುವ ಸಂಸ್ಥೆಯೊಂದರನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಅನುವು ಮಾಡಿಕೊಡಲಾಗಿದೆ.
ಯಾವುದೇ ಮಾಧ್ಯಮ ಸಂಸ್ಥೆಯು ಆನ್ಲೈನ್ನಲ್ಲಿ ಪ್ರಕಟಿಸುವ ಸುದ್ದಿ ಹಾಗೂ ವೀಡಿಯೋಗಳನ್ನೂ ಈ ಸಂಸ್ಥೆ ಪರಾಮರ್ಶಿಸಲಿದೆ. ಒಮ್ಮೆ ಸರ್ಕಾರದ ಈ ಸತ್ಯ ಶೋಧನಾ ಸಂಸ್ಥೆಯು ಒಂದು ಸುದ್ದಿ, ಮಾಹಿತಿ ಅತವಾ ವೀಡಿಯೋವನ್ನು ನಕಲಿ, ಸುಳ್ಳು ಅಥವಾ ದಾರಿತಪ್ಪಿಸುವಂತಹದ್ದು ಎಂದು ನಿರ್ಧರಿಸಿದಲ್ಲಿ, ಅವುಗಳನ್ನು ತೆಗೆದುಹಾಕಲು ಸಂಬಂಧಿತ ಜಾಲತಾಣಗಳಿಗೆ ಸರ್ಕಾರ ಸೂಚಿಸಬಹುದಾಗಿದೆ.
ಕೇಂದ್ರ ಸರ್ಕಾರದ ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದ ನಕಲಿ, ಸುಳ್ಳು ಮಾಹಿತಿ ಶೇರ್ ಮಾಡಬಾರದೆಂಬ ನಿಯಮವನ್ನೂ ಸಾಮಾಜಿಕ ಜಾಲತಾಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕಿದೆ.
ಸಂಬಂಧಿತ ಎಲ್ಲರ ಜೊತೆ ಚರ್ಚಿಸಿ ನಕಲಿ ಸುದ್ದಿಗಳನ್ನು ಗುರುತಿಸುವ ಸತ್ಯಶೋಧನಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಆದರೆ ಈ ತಿದ್ದುಪಡಿಗಳ ಕುರಿತು ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಕಳವಳ ವ್ಯಕ್ತಪಡಿಸಿದೆ. ಇದು ಆನ್ಲೈನ್ ವಾಕ್ ಸ್ವಾತಂತ್ರ್ಯ ಹಾಗೂ ಮಾಹಿತಿ ಪಡೆಯುವ ಹಕ್ಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಫೌಂಡೇಶನ್ ಹೇಳಿದೆ.
ಯಾವುದೇ ವಿಷಯವನ್ನು ನಿರ್ಬಂಧಿಸುವುದಕ್ಕೆ ಕಠಿಣ ಪ್ರಕ್ರಿಯೆಗಳನ್ನು ನಿಗದಿಪಡಿಸಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಈ ತಿದ್ದುಪಡಿ ಉಲ್ಲಂಘಿಸುತ್ತದೆ ಎಂದು ಫೌಂಡೇಶನ್ ಹೇಳಿದೆ.
ಐಟಿ ನಿಯಮಗಳಿಗೆ ತಿದ್ದುಪಡಿ ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕೂಡ ಕಳವಳ ವ್ಯಕ್ತಪಡಿಸಿದೆಯಲ್ಲದೆ ಈ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು ಹಾಗೂ ಮಾಧ್ಯಮ ಸಂಸ್ಥೆಗಳ ಜೊತೆ ಸರ್ಕಾರ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದೆ.