ಕಲ್ಲಿದ್ದಲು ಯೋಜನೆಗಳನ್ನು ನಿಲ್ಲಿಸಲು ಕಾನೂನು ಪ್ರಯತ್ನಗಳಿಗೆ ಹಣಕಾಸು ಕ್ರೋಡೀಕರಿಸಲು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್ಸಿಆರ್ಎ)ಯನ್ನು ಉಲ್ಲಂಘಿಸಿದ್ದಕ್ಕಾಗಿ ಖ್ಯಾತ ಪರಿಸರವಾದಿ ವಕೀಲ ರಿತ್ವಿಕ್ ದತ್ತಾ ಅವರ ವಿರುದ್ಧ ಸಿಬಿಐ ಕಳೆದ ವಾರ ಎಫ್ಐಆರ್ ದಾಖಲಿಸಿದೆ.
ದತ್ತಾ ಆಸ್ಟ್ರೇಲಿಯಾದಲ್ಲಿ ಅದಾನಿ ಚಟುವಟಿಕೆಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ ಮತ್ತು ತನ್ಮೂಲಕ ಭಾರತದ ಭೌಗೋಲಿಕ ಗಡಿಗಳ ಹೊರಗೆ ದೇಶದ ಆರ್ಥಿಕ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುತ್ತಿದ್ದಾರೆ ಎಂದು ಹೇಳಿರುವ ಎಫ್ಐಆರ್, ದತ್ತಾ ಎಫ್ಸಿಆರ್ಎ ಅಡಿ ಸ್ವೀಕರಿಸಿರುವ ಅನುದಾನವನ್ನು ಸಂಘ ಪರಿವಾರ ಸಂಯೋಜಿತ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ, ಡಬ್ಲ್ಯುಡಬ್ಲ್ಯುಎಫ್-ಇಂಡಿಯಾ ಮತ್ತು ಸಮತಾದಂತಹ ಎಫ್ಸಿಆರ್ಎ ನಿಧಿಗೆ ಅರ್ಹವಲ್ಲದ ಸ್ಥಳೀಯ ಪಾಲುದಾರ ಎನ್ಜಿಒಗಳಿಗೆ ವರ್ಗಾಯಿಸುತ್ತಿದ್ದಾರೆ ಎಂದೂ ಆರೋಪಿಸಿದೆ.
ಎಫ್ಐಆರ್ ದತ್ತಾರ ಕಕ್ಷಿದಾರರನ್ನು ಪಟ್ಟಿ ಮಾಡಿದೆ ಮತ್ತು ಯಾವುದೇ ಸಂದರ್ಭವನ್ನು ಉಲ್ಲೇಖಿಸದೆ ಅರಾವಳಿ ಬಚಾವೊ ಸಿಟಿಜನ್ಸ್ ಮೂವ್ಮೆಂಟ್ ಅನ್ನು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳಂತೆ ಪ್ರತಿಭಟನೆಯಲ್ಲಿ ತೊಡಗಿರುವ ಸಂಘಟನೆಯಾಗಿದೆ ಎಂದು ಪ್ರತ್ಯೇಕಿಸಿದೆ.
ದತ್ತಾರ ಮಾಲಿಕತ್ವದ ಸಂಸ್ಥೆ ಲೀಗಲ್ ಇನಿಷಿಯೇಟಿವ್ ಫಾರ್ ಫಾರೆಸ್ಟ್ ಆಯಂಡ್ ಎನ್ವಿರಾನ್ಮೆಂಟ್ (ಲೈಫ್) ವಿತ್ತವರ್ಷ 2016-21ರ ನಡುವೆ ತಾನು ಸ್ಯಾನ್ಫ್ರಾನ್ಸಿಸ್ಕೋದ ಲಾಭೇತರ ಅರ್ತ್ ಜಸ್ಟೀಸ್ (ಇಜೆ)ನಿಂದ ಪಡೆದಿದ್ದ ಒಟ್ಟು 22 ಕೋ.ರೂ.ಗಳ ಅನುದಾನವನ್ನು ವೃತ್ತಿಪರ ಸ್ವೀಕೃತಿ ಎಂದು ತೋರಿಸಿದೆ. ವಾಸ್ತವದಲ್ಲಿ ಅದು ಇಜೆಗೆ ಯಾವುದೇ ಕಾನೂನು ಸೇವೆಯನ್ನು ಒದಗಿಸಿಲ್ಲ ಮತ್ತು ಕಲ್ಲಿದ್ದಲು ಯೋಜನೆಯನ್ನು ನಿಲ್ಲಿಸಲೆಂದೇ ಅದಕ್ಕೆ ವಿದೇಶಿ ದೇಣಿಗೆಯನ್ನು ನೀಡಲಾಗುತ್ತಿದೆ. ಲೈಫ್ ಮತ್ತು ಇಜೆ ಭಾರತದಲ್ಲಿ ಕಲ್ಲಿದ್ದಲು ಯೋಜನೆಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ ಎನ್ನುವುದು ಸಿಬಿಐ ಎಫ್ಐಆರ್ ನಲ್ಲಿ ರೈಟ್ ಲಿವ್ಲಿಹುಡ್ ಪ್ರಶಸ್ತಿ ಪುರಸ್ಕೃತ ದತ್ತಾ ವಿರುದ್ಧದ ಮುಖ್ಯ ಆರೋಪವಾಗಿದೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯು ಕಳೆದ ವರ್ಷದ ನವಂಬರ್ನಲ್ಲಿ ಸಲ್ಲಿಸಿದ್ದ ವರದಿಯ ಆಧಾರದಲ್ಲಿ ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಸಿಬಿಐ ಈ ಎಫ್ಐಆರ್ನ್ನು ದಾಖಲಿಸಿದೆ. 2022, ಸೆ.7ರಂದು ದಿಲ್ಲಿಯಲ್ಲಿಯ ಲೈಫ್ ಕಚೇರಿಯ ಮೇಲೆ ಸಿಬಿಐ ದಾಳಿಯನ್ನೂ ನಡೆಸಿತ್ತು.
ಗುಜರಾತ್ ಸರಕಾರ ಮತ್ತು ಅದಾನಿ ಎಂಟರ್ಪ್ರೈಸಸ್ ವಿರುದ್ಧ ಗುಜರಾತ ಮೂಲದ,ಸ್ಥಳೀಯ ರೈತರು ರಚಿಸಿಕೊಂಡಿರುವ ಖೇತಿ ವಿಕಾಸ ಸೇವಾ ಟ್ರಸ್ಟ್ (ಕೆವಿಎಸ್ಟಿ) ಪಿಐಎಲ್ ಸಲ್ಲಿಸಿತ್ತು ಮತ್ತು ದತ್ತಾ ಅದರ ಪರವಾಗಿ ವಾದಿಸಿದ್ದರು. ಸಾರ್ವಜನಿಕ ಡೊಮೇನ್ನಲ್ಲಿ ಲಭ್ಯ ಮಾಹಿತಿಯಂತೆ ಗುಜರಾತಿನಲ್ಲಿ ಸರಕಾರದ ನೀತಿಯ ವಿರುದ್ಧ ಸ್ಥಳೀಯ ರೈತರನ್ನು ಎತ್ತಿ ಕಟ್ಟುವಲ್ಲಿ ದತ್ತಾ ಭಾಗಿಯಾಗಿರುವಂತೆ ಕಂಡು ಬಂದಿದೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಪ್ರಶ್ನೆಯಲ್ಲಿರುವ ಪ್ರಕರಣಕ್ಕೆ ಕಲ್ಲಿದ್ದಲಿನೊಂದಿಗೆ ಯಾವುದೇ ಸಂಬಂಧವಿಲ್ಲ, ಅದುಗುಜರಾತಿನ ಕಛ್ ಜಿಲ್ಲೆಯ ಮುಂದ್ರಾದ ಹಸಿರು ವಲಯ ತಾಮ್ರ ಸಂಸ್ಕರಣೆ ಘಟಕಕ್ಕೆ ಸಂಬಂಧಿಸಿದೆ. ಅದೀಗ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಬಾಕಿಯುಳಿದಿದೆ.





