ನವದೆಹಲಿ: 'ದೇಶದ ವಿರುದ್ಧ ಸಮರ ಸಾರಲು ಸಂಚು ರೂಪಿಸಿದ್ದ ಖಾಲಿಸ್ತಾನಿ ಭಯೋತ್ಪಾದಕ ಕಾಶ್ಮೀರ್ ಸಿಂಗ್ ಗಲ್ವಾಡಿ ಅಲಿಯಾಸ್ ಬಲ್ಬೀರ್ ಸಿಂಗ್ ಬಗ್ಗೆ ಸುಳಿವು ನೀಡಿದವರಿಗೆ ₹ 10 ಲಕ್ಷ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಘೋಷಿಸಿದೆ' ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
'ಲುಧಿಯಾನ ನಿವಾಸಿಯಾಗಿರುವ ಕಾಶ್ಮೀರ್ ಸಿಂಗ್ ವಿರುದ್ಧ ಕಳೆದ ವರ್ಷದ ಆಗಸ್ಟ್ 20ರಂದು ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಈತನ ಸುಳಿವು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ದೆಹಲಿ ಪ್ರಧಾನ ಕಚೇರಿ ಮತ್ತು ಚಂಡೀಗಢದ ಪ್ರಾದೇಶಿಕ ಕಚೇರಿಯ ದೂರವಾಣಿ ಸಂಖ್ಯೆ, ವಾಟ್ಸ್ಆಯಪ್, ಟೆಲಿಗ್ರಾಮ್ ಸಂಖ್ಯೆಗೆ ಕರೆ ಮಾಡಿ ಇಲ್ಲವೇ ಇ-ಮೇಲ್ ಮೂಲಕ ಸುಳಿವು ನೀಡಬಹುದು' ಎಂದು ಎನ್ಐಎ ತಿಳಿಸಿದೆ.