ಕೊಚ್ಚಿ: ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯದ ವೇಳೆ ಖೈದಿಯಾಗಿರುವ ರೋಗಿಯಿಂದ ಘಾಸಿಗೊಳಗಾಗಿ ಸಾವನ್ನಪ್ಪಿರುವ ಡಾ. ವಂದನಾ ದಾಸ್ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮನೋಜ್ ರಾಜಗೋಪಾಲ್ ಸಾರ್ವಜನಿಕ ಹಿತಾಸಕ್ತಿಯಿಂದ ವಂದನಾ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ವಿ.ಭಟ್ಟಿ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ವಂದನಾಗೆ ನ್ಯಾಯ ದೊರಕಿಸಲು ನ್ಯಾಯಾಲಯ ತನಿಖೆಯ ಮೇಲೆ ನಿಗಾ ಇಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಸ್ವಯಂ ಪ್ರೇರಣೆಯಿಂದ ನ್ಯಾಯಾಲಯ ಕೈಗೆತ್ತಿಕೊಂಡಿರುವ ಪ್ರಕರಣದ ಜತೆಗೆ ಈ ಅರ್ಜಿಯನ್ನೂ ಸೇರಿಸುವಂತೆ ಹೈಕೋರ್ಟ್ ಸೂಚಿಸಿದೆ.
ಮೇ 10ರಂದು ಈ ದಾರುಣ ಹತ್ಯೆ ನಡೆದಿದೆ. ಗಾಯಗೊಂಡು ಚಿಕಿತ್ಸೆಗಾಗಿ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಗೆ ಪೊಲೀಸರು ಕರೆತಂದ ಸಂದೀಪ್ ಆಸ್ಪತ್ರೆಯಲ್ಲಿ ಹಿಂಸಾಚಾರ ನಡೆಸಿ ವೈದ್ಯೆ ವಂದನಾಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಶಾಲಾ ಶಿಕ್ಷಕನಾಗಿದ್ದ ಆರೋಪಿ ಸಂದೀಪ್ ಈಗ ಜೈಲು ಸೇರಿದ್ದಾನೆ.