ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಸಹಯೋಗದೊಂದಿಗೆ ಪೆರಡಾಲ ವಸಂತ ವೇದಪಾಠಶಾಲೆಯ ವಿದ್ಯಾರ್ಥಿಗಳಿಗೆ ಒಂದು ದಿನದ ಜೀವನ ಬೋಧೆ ಶಿಬಿರವನ್ನು ನಡೆಸಲಾಯಿತು. ಶುಕ್ರವಾರ ಬೆಳಗ್ಗೆ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಅಧ್ಯಕ್ಷ ಶಂಕರನಾರಾಯಣ ಭಟ್ ಕುಳಮರ್ವ ಧ್ವಜಾರೋಹಣಗೈದು ಮಾತನಾಡಿ, ಎಲ್ಲರೂ ಆರೋಗ್ಯ ಆನಂದವನ್ನು ಬಯಸುವವರಾಗಿದ್ದಾರೆ. ನಾವು ಸಂಸ್ಕಾರವಂತರಾದಾಗ ಇದೆಲ್ಲವೂ ಲಭಿಸುತ್ತದೆ. ವೇದವು ನಮ್ಮ ಬದುಕಿನ ಕೀಲಿಕೈಯಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡಾಗ ನಮ್ಮ ಜೀವನಪಾವನವಾಗುತ್ತದೆ. ನಾವು ಮಾಡುವ ಕರ್ಮಕ್ಕೆ ತಕ್ಕ ಪ್ರತಿಫಲ ಲಭಿಸುತ್ತದೆ. ಸನ್ಮಾರ್ಗದಲ್ಲಿ ಮುನ್ನಡೆಯಲು ಶಂಕರಾಚಾರ್ಯರು ಸ್ಪಷ್ಟವಾದ ಮಾರ್ಗಸೂಚಿಯನ್ನು ಹಾಕಿರುತ್ತಾರೆ. ನಮ್ಮೊಳಗಿರುವ ದೇವತಾ ಶಕ್ತಿಗೆ ಪ್ರಚೋದನೆಯನ್ನು ನೀಡಿದಾಗ ಬುದ್ಧಿ ವಿಕಾಸವನ್ನು ಹೊಂದುತ್ತದೆ ಎಂದರು.
ಮುಳ್ಳೇರಿಯ ಹವ್ಯಕ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಮಾತನಾಡಿ ಮಾಡಲೇಬೇಕಾದ ಕೆಲಸಗಳನ್ನು ನಮ್ಮ ಕರ್ತವ್ಯ ಎಂಬುದಾಗಿ ನಾವು ತಿಳಿದುಕೊಳ್ಳಬೇಕು. ಪರಂಪರಾಗತವಾಗಿ ಬಂದ ನಮ್ಮ ಸಂಸ್ಕøತಿಗೆ ಪೂರಕವಾದ ಜೀವನವು ನಮ್ಮದಾಗಬೇಕು ಎಂದರು.
ಶಿಬಿರ ಸಂಯೋಜಕ ಶ್ಯಾಮಪ್ರಸಾದ ಕುಳಮರ್ವ ಮಾತನಾಡಿದರು. ಪ್ರಮುಖರಾದ ಕುಸುಮ ಪೆರ್ಮುಖ, ವೈ.ಕೆ.ಗೋವಿಂದ ಭಟ್, ಕೇಶವಪ್ರಸಾದ ಎಡೆಕ್ಕಾನ, ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಉದನೇಶವೀರ ಕಿಳಿಂಗಾರು, ವೇದಗುರುಗಳಾದ ಸುಬ್ರಹ್ಮಣ್ಯ ಪ್ರಸಾದ, ಮಹಾಗಣಪತಿ, ಮುರಲೀಕೃಷ್ಣ, ಶ್ರೀಹರಿ ಪೆರ್ಮುಖ, ಪದ್ಮರಾಜ ಪಟ್ಟಾಜೆ, ಡಾ. ವೈ.ವಿ.ಕೃಷ್ಣಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು. ಗೋವಿಂದ ಬಳ್ಳಮೂಲೆ, ಬಾಲಕೃಷ್ಣ ಕುಳಮರ್ವ, ಶಿವಶಂಕರ ತಲ್ಪಣಾಜೆ, ಶ್ರೀರಾಮಚಂದ್ರಾಪುರ ಮಠದ ಪ್ರೇರಣಾ ತಂಡದ ಬಾಲಸುಬ್ರಹ್ಮಣ್ಯ ಬೆಂಗಳೂರು, ಕೃಷ್ಣಪ್ರವೀಣ ಬೇಳ, ಉಮಾ ಬೇಳ, ವಿಜೇತ ಪೆರ್ಮಾರು ವಿವಿಧ ತರಗತಿಗಳಲ್ಲಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು. ಪೆರ್ಮುಖ ಶ್ರೀಕೃಷ್ಣ ಶರ್ಮ ಗುತ್ತಿಗಾರು, ಮಾತೃಪ್ಪಾಡಿ ಮನೆಯವರು, ರಮೇಶ್ ಭಟ್ ಸರವು, ಹರೀಶ ಮೈರ್ಕಳ ಹಾಗೂ ಶ್ರೀಮಠದ ಭಕ್ತರು ಶಿಬಿರದಲ್ಲಿ ತಮ್ಮ ಪ್ರಾಯೋಜಕತ್ವವನ್ನು ವಹಿಸಿದ್ದರು. ತೇಜಸ್ವಿ ಕುಳಮರ್ವ ಸ್ವಾಗತಿಸಿ, ವೈ.ಕೆ.ಗೋವಿಂದ ಭಟ್ ವಂದಿಸಿದರು.