ಮಾಸ್ಕೋ: ರಷ್ಯಾದಲ್ಲಿ ಆಂತರಿಕ ಯುದ್ಧದ ಕಾರ್ಮೋಡ ಕವಿದಿದೆ. ಅಧ್ಯಕ್ಷ ವ್ಲಾಡಿಮಿರ್ ಪುತಿನ್ ವಿರುದ್ಧವೇ ವಾಗ್ನರ್ ಪಡೆ ದಂಗೆ ಎದ್ದಿದೆ. ಈಗಾಗಲೇ ರೋಸ್ತೋವ್ ನಗರವನ್ನು ವಶಕ್ಕೆ ಪಡೆದು ರಾಜಧಾನಿ ಮಾಸ್ಕೋ ಕಡೆ ಹೊರಟ್ಟಿದ್ದ ವಾಗ್ನರ್ ಪಡೆ, ಇದೀಗ ಹಿಂದೆ ಸರಿಯಲು ಒಪ್ಪಿಕೊಂಡಿದ್ದು, ಬಂಡಾಯ ಶಮನಗೊಂಡಿದೆ.
ವಾಗ್ನರ್ ಪಡೆ ಒಂದು ಖಾಸಗಿ ಸೇನಾ ಪಡೆ. ಇದನ್ನು ಪುತಿನ್ ಅವರ ಮಾಜಿ ಪರಮಾಪ್ತ ಯೆವ್ಗೆನಿ ಪ್ರಿಗೊಜಿನ್ ನಡೆಸುತ್ತಿದ್ದಾರೆ. ರೋಸ್ತೊವ್ ನಗರವನ್ನು ವಶಕ್ಕೆ ಪಡೆದಿದ್ದ ವಾಗ್ನರ್ ಪಡೆ, 1100 ಕಿ.ಮೀ ದೂರದಲ್ಲಿದ್ದ ರಾಜಧಾನಿ ಮಾಸ್ಕೋ ಕಡೆ ಹೊರಟಿತ್ತು. ಆಡಿಯೋ ಸಂದೇಶದಲ್ಲಿ, ರಷ್ಯಾದಲ್ಲಿ ರಕ್ತಪಾತದ ಅಪಾಯವನ್ನು ತಡೆಗಟ್ಟುವ ಉದ್ದೇಶದಿಂದ ವಾಗ್ನರ್ ಪಡೆ ತಮ್ಮ ನೆಲೆಗಳಿಗೆ ಹಿಂದಿರುಗುತ್ತದೆ ಎಂದು ಪ್ರಿಗೋಜಿನ್ ಹೇಳಿದ್ದಾರೆ.
ವಾಗ್ನರ್ ಪಡೆಯನ್ನು ಮನವೊಲಿಸಲು ಬೆಲರುಸಿಯನ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಮಧ್ಯಸ್ಥಿಕೆ ವಹಿಸಿದ್ದು, ಪ್ರಿಗೋಜಿನ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಿಗೋಜಿನ್ ಜತೆಗಿನ ಒಪ್ಪಂದವನ್ನು ರಷ್ಯಾ ಸರ್ಕಾರ ಖಚಿತಪಡಿಸಿದ್ದು, ಒಪ್ಪಂದದ ಪ್ರಕಾರ ಪ್ರಿಗೋಜಿನ್ ವಿರುದ್ಧ ಎಲ್ಲ ಅಪರಾಧಗಳನ್ನು ಕೈಬಿಡುವುದು ಮತ್ತು ಅವರು ಬೆಲರಸ್ಗೆ ಮರಳುವುದಾಗಿದೆ.
ಇಡೀ ದಿನ ಮಾತುಕತೆ ನಡೆದಿದ್ದು, ರಷ್ಯಾದ ಒಳಗೆ ರಕ್ತಪಾತವನ್ನು ತಪ್ಪಿಸುವ ಉದ್ದೇಶದಿಂದ ಅಂತಿಮವಾಗಿ ಒಂದು ಒಪ್ಪಂದಕ್ಕೆ ಬರಲಾಯಿತು. ಯೆವ್ಗೆನಿ ಪ್ರಿಗೊಝಿನ್ ಅವರು ರಷ್ಯಾದ ಭೂಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಾಗ್ನರ್ ಪಡೆಯ ಚಲನೆಯನ್ನು ನಿಲ್ಲಿಸಲು ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಬೆಲುರುಶಿಯನ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರ ಪ್ರಸ್ತಾಪವನ್ನು ಒಪ್ಪಿಕೊಂಡರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನ್ಯಾಯಕ್ಕಾಗಿ ಹೋರಾಟ
ಇದಕ್ಕೂ ಮುನ್ನ ಮಾತನಾಡಿದ್ದ ಪ್ರಿಗೋಜಿನ್, ಯೂಕ್ರೇನ್ನಲ್ಲಿನ ಯುದ್ಧವನ್ನು ನಮ್ಮ ಮೇಲೆ ದೂಷಿಸಿದ ಭ್ರಷ್ಟ ಮತ್ತು ಅಸಮರ್ಥ ರಷ್ಯಾದ ಕಮಾಂಡರ್ಗಳನ್ನು ತೊಡೆದುಹಾಕಲು ತನ್ನ ಹುಡುಗರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.
ನಮ್ಮ ಜನರಿಗೆ ಉತ್ತರಿಸುತ್ತಾರೆ
ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೆಲಿವೈಸ್ಡ್ ಮೂಲಕ ಮಾತನಾಡಿ, ರಷ್ಯಾ ಅಪಾಯದಲ್ಲಿದೆ ಎಂದು ಹೇಳಿದರು. ನಾವು ನಮ್ಮ ಜನರ ಜೀವನ ಮತ್ತು ಭದ್ರತೆಗಾಗಿ, ನಮ್ಮ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯಕ್ಕಾಗಿ, ಸಾವಿರ ವರ್ಷಗಳ ಇತಿಹಾಸ ಹೊಂದಿರುವ ರಷ್ಯಾವಾಗಿ ಉಳಿಯುವ ಹಕ್ಕಿಗಾಗಿ ಹೋರಾಡುತ್ತಿದ್ದೇವೆ ಎಂದಿದ್ದರು. ಅಲ್ಲದೆ, ದೇಶದ್ರೋಹದ ಹಾದಿಯಲ್ಲಿ ಉದ್ದೇಶಪೂರ್ವಕವಾಗಿ ಹೆಜ್ಜೆ ಹಾಕಿದವರು, ಸಶಸ್ತ್ರ ದಂಗೆಯನ್ನು ಸಿದ್ಧಪಡಿಸಿದವರು, ಬ್ಲಾಕ್ಮೇಲ್ ಮತ್ತು ಭಯೋತ್ಪಾದಕ ವಿಧಾನಗಳ ಹಾದಿಯನ್ನು ಹಿಡಿದವರು, ಅನಿವಾರ್ಯವಾಗಿ ಶಿಕ್ಷೆಯನ್ನು ಅನುಭವಿಸುತ್ತಾರೆ ಮತ್ತು ಕಾನೂನಿಗೆ ಮತ್ತು ನಮ್ಮ ಜನರಿಗೆ ಉತ್ತರಿಸುತ್ತಾರೆ ಎಂದು ವಾಗ್ನರ್ ಪಡೆ ವಿರುದ್ಧ ಪುಟಿನ್ ಎಚ್ಚರಿಕೆ ನೀಡಿದ್ದರು.