ರಾಯಗಡ: ಮಹಾರಾಷ್ಟ್ರದ ಕರಾವಳಿ ಕೊಂಕಣ ಪ್ರದೇಶಕ್ಕೆ ಸೇರಿದ ರಾಯಗಡ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ರಾಯಗಡ: ಮಹಾರಾಷ್ಟ್ರದ ಕರಾವಳಿ ಕೊಂಕಣ ಪ್ರದೇಶಕ್ಕೆ ಸೇರಿದ ರಾಯಗಡ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಮೃತರು ಬುಡಕಟ್ಟು ಸಮುದಾಯಕ್ಕೆ ಸೇರಿದ್ದಾರೆ. ಅವಶೇಷಗಳಡಿ ಇನ್ನು ಹಲವರು ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) ನಾಲ್ಕು ತಂಡಗಳು, ರಾಜ್ಯ ವಿಪತ್ತು ನಿರ್ವಹಣಾ ತಂಡಗಳು (ಎಸ್ಡಿಆರ್ಎಫ್), ಮಹಾರಾಷ್ಟ್ರ ಪರ್ವತಾರೋಹಿ ರಕ್ಷಣಾ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿ, ಚಾರಣಿಗರು, ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ರಾಯಗಡ ಜಿಲ್ಲೆಯ ಖಲಾಪುರ ತಾಲ್ಲೂಕಿನ ಇರ್ಶಾಲವಾಡಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಧಾರಾಕಾರವಾಗಿ ಸುರಿದ ಮಳೆಯೇ ಅವಘಡಕ್ಕೆ ಕಾರಣವಾಗಿದೆ. ಈ ಹಳ್ಳಿಯಲ್ಲಿ 48 ಮನೆಗಳಿದ್ದು, ಈ ಪೈಕಿ 17 ಮನೆಗಳು ನೆಲಸಮಗೊಂಡಿವೆ. ಒಟ್ಟು 288 ಜನರು ಇಲ್ಲಿ ವಾಸಿಸುತ್ತಿದ್ದರು.