ಆಗಸ್ಟ್ 15 ಭಾರತೀಯರಿಗೆ ಸಂಭ್ರಮ-ಸಡಗರದ ದಿನ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವನ್ನು ತುಂಬಾನೇ ಅದ್ಧೂರಿಯಾಗಿ ಆಚರಿಸಲಾಗುವುದು. ಈ ದಿನದ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದೇ ಆನಂದ. ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದ್ದಂತೆ ಕೆಲವರಿಗೆ ಇದು 76ನೇ ಸ್ವಾತಂತ್ರ್ಯ ದಿನಾಚರಣೆಯೇ ಅಥವಾ 77ನೇ ಸ್ವಾತಂತ್ರ್ಯ ದಿನಾಚರಣೆಯೇ ಎಂಬ ಡೌಟು ಶುರುವಾಗಿದೆ.
ಭಾರತಕ್ಕೆ ಹಲವಾರು ಭಾರತೀಯ ಹೋರಾಟಗಾರರ ತ್ಯಾಗದ ಫಲವೆಂಬಂತೆ ಆಗಸ್ಟ್ 15, 1947ರಂದು ಸ್ವಾತಂತ್ರ್ಯ ಬಂತು. ಈ ದಿನಕ್ಕೆ ಈಸ್ಟ್ ಇಂಡಿಯಾ ಕಂಪನಿ ಎಂಬ ಬ್ರಿಟಿಷರ ಸಾಮ್ರಾಜ್ಯ ಭಾರತದಿಂದ ತೊಲಗಿತು. ಅದರ ನಂತರ ನಮ್ಮ ಇತಿಹಾಸ ಹಾಗೂ ಸ್ವಾತಂತ್ರ್ಯ ಭಾರತದ ಮಹತ್ವ ಸಾರಲು ಪ್ರತೀವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಲಸಲಾಗುತ್ತಿದೆ.
ನಮಗೆ ಸ್ವಾತಂತ್ರ್ಯ ಸಿಕ್ಕ ಮೇಲೆ ಮೊದಲ ಸ್ವಾತಂತ್ರ್ಯ ದಿನಾಚರಣೆಯ ವಾರ್ಷಿಕೋತ್ಸವವನ್ನು ಆಗಸ್ಟ್ 15, 1948ರಂದು ಆಚರಿಸಲಾಯಿತು, ಈ ಲೆಕ್ಕಾಚಾರದಲ್ಲಿ ನೋಡಿದರೆ 2023ಕ್ಕೆ ನಾವು 76ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ.
ಅದೇ ಸ್ವಾತಂತ್ರ್ಯ ಸಿಕ್ಕ ವರ್ಷದಿಂದ ಲೆಕ್ಕಾಚಾರ ಮಾಡಿದರೆ ಈ ವರ್ಷಕ್ಕೆ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ಹಾಗಾಗಿ ಕೆಲವರು ಇದು 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಎಂದರೆ ಇನ್ನು ಕೆಲವರು 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಎಂದು ಹೇಳುತ್ತಾರೆ. ಎಷ್ಟು ವರ್ಷ ಎಂಬುವುದಕ್ಕಿಂತ ನಮ್ಮ ಹಿರಿಯರು ನೆತ್ತರು ಸುರಿಸಿ, ಹೋರಾಟ ಮಾಡಿ ನಮಗೆ ನೀಡಿರುವ ಈ ಅಮೂಲ್ಯವಾದ ಸ್ವಾತಂತ್ರ್ಯಕ್ಕೆ ಕೃತಜ್ಞತೆಯನ್ನು ಸಲ್ಲಿಸುವುದು ಮುಖ್ಯ. ಜಗತ್ತಿನ ಎಷ್ಟೋ ರಾಷ್ಟ್ರಗಳಲ್ಲಿ ಜನರು ಮುಕ್ತವಾದ ಸ್ವಾತಂತ್ರ್ಯ ಅನುಭವಿಸಲು ಸಾಧ್ಯವಿಲ್ಲ, ಆದರೆ ಭಾರತದಲ್ಲಿ ಸುಂದರವಾಗಿ ನಮ್ಮ ಇಚ್ಛೆಗೆ ಬದುಕು ಕಟ್ಟಿಕೊಳ್ಳುವ ಎಲ್ಲಾ ಸ್ವಾತಂತ್ರ್ಯವಿದೆ. ಭಾರತದ ಸಂವಿಧಾನಕ್ಕೆ ಗೌರವ ಕೊಡುತ್ತಾ, ಭಾರತ ಮಾತೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುವಂತೆ ಬದುಕುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.
ಭಾರತೀಯ ನಾಗರಿಕ ಕರ್ತವ್ಯಗಳು
*ಸಂವಿಧಾನವನ್ನು ಗೌರವಿಸಬೇಕು, ರಾಷ್ಟ್ರ ಧ್ವಜ, ರಾಷ್ಟ್ರ ಲಾಂಛನವನ್ನು ಗೌರವಿಸಬೇಕು.
* ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ಕೊಟ್ಟ ಆದರ್ಶಗಳನ್ನು ಪಾಲಿಸಬೇಕು, ದೇಶದ ಸ್ವಾತಂತ್ರ್ಯ ಧಕ್ಕೆಯಾಗಲು ಬಿಡಬಾರದು
* ಭಾರತದ ಸಾರ್ವಭೌಮತ್ವ, ಅಖಂಡತೆ, ಏಕತೆಯನ್ನು ಎತ್ತಿಹಿಡಿಯಬೇಕು
* ದೇಶದ ರಕ್ಷಣೆ ಹಾಗೂ ದೇಶದ ಸೇವೆಗೆ ಸದಾ ಸಿದ್ಧವಾಗಿರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ
* ವಿವಿಧ ಧರ್ಮ, ಭಾಷೆ ಹಾಗೂ ಪ್ರಾಂತ್ಯಗಳ ಜನರೊಂದಿಗೆ ಸೌಹಾರ್ದತೆಯಿಂದ ವರ್ತಿಸುವುದು, ಮಹಿಳೆಯರನ್ನು ಗೌರವಿಸುವುದು
* ಭಾರತದ ವೈವಿಧ್ಯಮಯ ಸಂಸ್ಕೃತಿ ಗೌರವಿಸುವುದು, ಭಾರತದ ಪರಂಪರೆಯನ್ನು ಕಾಪಾಡುವುದು
* ದೇಶದ ಕಾಡು, ವನ್ಯ ಜೀವಿಗಳು, ನದಿ, ಪರಿಸರವನ್ನು ಸಂರಕ್ಷಣೆ ಮಾಡುವುದು
* ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಳ್ಳುವುದು
* ಸಾರ್ವಜನಿಕ ಸ್ವತ್ತಿಗೆ ಹಾನಿ ಮಾಡದೇ ಇರುವುದು
* ಎಲ್ಲಾ ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಯಲ್ಲಿ ಪ್ರಗತಿಗಾಗಿ ಹಾಗೂ ದೇಶದ ಕೀರ್ತಿ ಹೆಚ್ಚಿಸಲು ಶ್ರಮಿಸುವುದು
* ಮಕ್ಕಳು ಪೋಷಕರ ಪಾಲನೆ ಮಾಡುವುದು
ಪ್ರತಿಯೊಬ್ಬ ಭಾರತೀಯ ಈ ಕರ್ತವ್ಯಗಳನ್ನು ಪಾಲಿಸಬೇಕಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಪೂರ್ಣಗೊಳ್ಳಲಿದೆ, ನಾವು ವಿಜ್ಞಾನದಲ್ಲಿ ಚಂದ್ರಲೋಕಕ್ಕೆ ರಾಕೆಟ್ ಕಳುಹಿಸುವಷ್ಟರ ಮಟ್ಟಿಗೆ ಬೆಳೆದಿದ್ದೇವೆ, ದೇಶದ ರಕ್ಷಣೆ ಅಂತ ಬಂದಾಗ ನಮ್ಮಲ್ಲಿರುವ ಸೈನ್ಯಬಲ ಇತರ ರಾಷ್ಟ್ರಗಳಿಗೆ ನಟುಕ ಹುಟ್ಟಿಸುವಂತಿದೆ, ಭಾರತ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ರಾಷ್ಟ್ರವಾಗಿ ಬೆಳೆಯುತ್ತಿದೆ. ಆದರೆ ಆತಂರಿಕವಾಗಿ ನೋಡುವುದಾದರೆ ಬಡತನ, ನಿರುದ್ಯೋಗ ಈ ಬಗೆಯ ಸಮಸ್ಯೆಗಳು ಇನ್ನೂ ಇವೆ, ಈ ಸಮಸ್ಯೆಯಿಂದ ಮುಕ್ತಿ ಸಿಕ್ಕರೆ ನಮ್ಮ ಭಾರತ ಮತ್ತಷ್ಟು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುವುದರಲ್ಲಿ ಸಂದೇಹವೇ ಇಲ್ಲ.