ಬದಿಯಡ್ಕ: ಹಿಂದುಗಳ ಆರಾಧ್ಯ ದೇವರಾದ ಮಹಾಗಣಪತಿಯ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಕೇರಳ ಸ್ಪೀಕರ್ ಶಂಸೀರ್ ವಿರುದ್ಧ ಮಾತನಾಡದೆ ಎಡರಂಗ ಹಾಗೂ ಐಕ್ಯರಂಗದ ಶಾಸಕರು ಮೌನವಾಗಿ ವಿದಾನಸಭೆಯಲ್ಲಿ ಕುಳಿತಿದ್ದಾರೆ. ಕಮ್ಯೂನಿಸ್ಟ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದುಗಳು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಅತಿದೊಡ್ಡ ಸಮಸ್ಯೆಯನ್ನು ಎದುರಿಸಬೇಕಾದೀತು. ಕಮ್ಯೂನಿಸ್ಟ್ ಪಕ್ಷವು ಉಗ್ರಗಾಮಿಗಳ ದಾಸನಾಗುತ್ತಿದೆ ಎಂದು ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಹೇಳಿದರು.
ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಕೇರಳ ವಿಧಾನಸಭೆಯ ಸ್ಪೀಕರ್ ಗಣಪತಿ ದೇವರನ್ನು ಅವಹೇಳನಕಾರಿ ಹೇಳಿಕೆಯ ವಿರುದ್ದ ಮಂಗಳವಾರ ಬದಿಯಡ್ಕದಲ್ಲಿ ನಡೆದ ಬೃಹತ್ ನಾಮಜಪ ಘೋಷಯಾತ್ರೆಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನಿಷೇಧಿತ ಪಿಎಫ್ಐಗೆ ಸೇರಿದ ಮುಸ್ಲಿಂಮರ ಓಟುಬ್ಯಾಂಕ್ನ ದುರುದ್ದೇಶವನ್ನಿಟ್ಟುಕೊಂಡು ಸ್ಪೀಕರ್ ಶಂಸೀರ್ ಈ ಹೇಳಿಕೆ ನೀಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಆದ್ದರಿಂದ ಶಂಸೀರ್ ಹೇಳಿಕೆಯಲ್ಲಿ ಷಡ್ಯಂತ್ರ ಅಡಗಿದೆ. ಮುಖ್ಯಮಂತ್ರಿ ಇನ್ನಾದರೂ ಈ ವಿಚಾರದಲ್ಲಿ ಮೌನ ಮುರಿಯದಿದ್ದರೆ ಹಿಂದುಗಳಿಗೆ ಇನ್ನಷ್ಟು ಸಂಕಷ್ಟ ತಪ್ಪಿದ್ದಲ್ಲವೆಂದು ಇದೇ ವೇಳೆ ಅವರು ಮುನ್ನೆಚ್ಚರಿಕೆ ನೀಡಿದರು. ಹಿಂದುಗಳೆಲ್ಲ ಒಗ್ಗಟ್ಟಾಗಿ ಇವರನ್ನು ಎದುರಿಸುವ ಕಾಲಸನ್ನಿಹಿತವಾಗಿದೆ. ಮುಂದಿನ ಚುನಾವಣೆಯಲ್ಲಿ ಸಿಪಿಎಂ ಪಕ್ಷಕ್ಕೆ ಗಣಪತಿಯ ಶಾಪ ತಟ್ಟದಿರದು ಎಂದು ಅವರು ಇದೇ ವೇಳೆ ಗರ್ಜಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಕೇರಳ ಮತ್ತು ಕರ್ನಾಟಕದಲ್ಲಿ ಜಾತ್ಯಾತೀತತೆಯ ಮುಖವಾಡ ಹೊತ್ತು ಕೋಮುವಾದಿ ಪಕ್ಷಗಳು ಆಡಳಿತ ನಡೆಸುತ್ತಿವೆ. ಇದರಿಂದಾಗಿ ಸಮಾಜದಲ್ಲಿ ಅಶಾಂತಿ ಉಂಟಾಗಿದ್ದು ಮತದಾರರು ಇನ್ನಾದರೂ ಜಾಗೃತರಾಗಬೇಕೆಂದು ಕರೆನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬದಿಯಡ್ಕ ಪ್ರಾಂತ ಸಂಚಾಲಕ ಶಿವಶಂಕರ ಭಟ್ ಗುಣಾಜೆ, ವಿಶ್ವಹಿಂದು ಪರಿಷತ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ, ಬದಿಯಡ್ಕ ಪ್ರಖಂಡ ಅಧ್ಯಕ್ಷ ಚಂದ್ರನ್ ನಾಯರ್ ವಿದ್ಯಾಗಿರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಹಿತಾಕ್ಷ ಬಿ. ಸ್ವಾಗತಿಸಿ, ವಕೀಲ ಗಣೇಶ ಬಿ. ವಂದಿಸಿದರು. ಸುನಿಲ್ ಪಿ.ಆರ್. ನಿರೂಪಿಸಿದರು. ಪರಿವಾರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಪೆರಡಾಲ ದೇವಸ್ಥಾನದಿಂದ ಹೊರಟ ನಾಮಜಪಯಾತ್ರೆ ಬದಿಯಡ್ಕ ಪೇಟೆಯಲ್ಲಿ ಸಾರ್ವಜನಿಕ ಸಭೆಯೊಂದಿಗೆ ಸಮಾಪ್ತಿಯಾಯಿತು.




