ನವದೆಹಲಿ (PTI): ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮೊದಲೇ ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಗುರುವಾರ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನವದೆಹಲಿ (PTI): ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮೊದಲೇ ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಗುರುವಾರ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ಆಗಸ್ಟ್ 24ರಿಂದ ಈ ಪ್ರಕರಣ ಕುರಿತು ವಿಚಾರಣೆ ನಡೆಸುತ್ತಿದೆ. ಏಳನೇ ದಿನವಾದ ಬುಧವಾರ, ಬಿಡುಗಡೆಯನ್ನು ಸಮರ್ಥಿಸಿ ಅಪರಾಧಿಗಳ ಪರ ವಕೀಲರು ಮಂಡಿಸಿದ ವಾದವನ್ನು ಆಲಿಸಿತು.
'ಕಾನೂನು ಒಂದು ಉದಾತ್ತ ವೃತ್ತಿ ಎಂದು ಭಾವಿಸಿದರೂ ಶಿಕ್ಷೆ ಪ್ರಕಟಗೊಂಡ ಬಳಿಕ ಈ ಪ್ರಕರಣದ ಒಬ್ಬ ಅಪರಾಧಿಗೆ ಕಾನೂನು ಅಭ್ಯಸಿಸಲು ಅವಕಾಶ ಲಭಿಸಿದ್ದು ಹೇಗೆ' ಎಂದು ಅಚ್ಚರಿ ವ್ಯಕ್ತಪಡಿಸಿತು.
ನ್ಯಾಯಪೀಠದ ಗಮನಕ್ಕೆ ಈ ವಿಷಯ ಬಂದಿದ್ದನ್ನು ಗಮನಿಸಿದ ಅಪರಾಧಿ ರಾಧೇಶ್ಯಾಮ್ ಶಾ ಪರ ವಕೀಲ ರಿಷಿ ಮಲ್ಹೋತ್ರಾ, 'ನನ್ನ ಫಿರ್ಯಾದಿಯು 15 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದಾರೆ. ಅವರ ನಡವಳಿಕೆಯನ್ನು ಗಮನಿಸಿ ಸರ್ಕಾರವು ಕ್ಷಮಾಪಣೆ ನೀಡಿದೆ' ಎಂದು ಸಮರ್ಥಿಸಿಕೊಂಡರು.
2014ರ ಕ್ಷಮಾಪಣೆ ನೀತಿ ಅನ್ವಯ ಸಿಬಿಐ ತನಿಖೆ ನಡೆಸಿದ ಕ್ರಿಮಿನಲ್ ಪ್ರಕರಣದ ಅಥವಾ ಅತ್ಯಾಚಾರ ಎಸಗಿ ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ವಿಧಿಸುವ ಶಿಕ್ಷೆಯ ಅವಧಿ ಪೂರ್ಣಗೊಳ್ಳುವುದಕ್ಕೂ ಮೊದಲೇ ಅವರನ್ನು ಬಿಡುಗಡೆಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಆದರೆ, ಗುಜರಾತ್ ಸರ್ಕಾರವು 1992ರ ಕ್ಷಮಾಪಣೆ ನೀತಿ ಆಧರಿಸಿ ಬಿಲ್ಕಿಸ್ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿದೆ.
ಇದನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೇ, ಸರ್ಕಾರದ ಧೋರಣೆ ವಿರುದ್ಧ ಸಿಪಿಎಂ ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್, ಲಖನೌ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ರೂಪ ರೇಖಾ ವರ್ಮಾ ಹಾಗೂ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.