ನವದೆಹಲಿ: '2047ರ ಹೊತ್ತಿಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪೈಕಿ ಒಂದಾಗಲಿದೆ. ಉಳಿದ ದೇಶಗಳಿಗೆ ಹೋಲಿಸಿದರೆ ನಮ್ಮ ಆರ್ಥ ವ್ಯವಸ್ಥೆಯು ಹೆಚ್ಚು ಒಳಗೊಳ್ಳುವಿಕೆ ಹಾಗೂ ನಾವೀನ್ಯದಿಂದ ಕೂಡಿರಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಬಡತನದ ವಿರುದ್ಧದ ಹೋರಾಟದಲ್ಲಿ ನಮ್ಮ ಬಡವರ ಸಂಪೂರ್ಣ ಜಯ ಗಳಿಸುವರು. ದೇಶದ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಬೆಳವಣಿಗೆ ವಿಶ್ವದಲ್ಲಿಯೇ ಅತ್ಯುತ್ತಮವಾಗಿರಲಿದೆ' ಎಂದೂ ಮೋದಿ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಆರ್ಥಿಕ ವಿದ್ಯಮಾನ, ವಿಶ್ವಸಂಸ್ಥೆಯಲ್ಲಿ ಸುಧಾರಣೆ, ಭ್ರಷ್ಟಾಚಾರ, ಜಾತೀಯತೆ ಸೇರಿದಂತೆ ಹತ್ತಾರು ವಿಷಯಗಳ ಕುರಿತು ಮಾತನಾಡಿದ್ದಾರೆ.
'ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕತೆ, ಶಿಕ್ಷಣ, ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ತರಲಾಗಿದೆ. ದೇಶದ ಈ ಪ್ರಗತಿಯು ರಾಜಕೀಯ ಸ್ಥಿರತೆ ಹಾಗೂ ಸುಧಾರಣೆಗಳ ಉಪ ಉತ್ಪನ್ನವೇ ಆಗಿದೆ' ಎಂದು ಪ್ರತಿಪಾದಿಸಿದರು.
ಸಂದರ್ಶನದಲ್ಲಿ ಪ್ರಸ್ತಾಪಗೊಂಡ ಪ್ರಮುಖ ಅಂಶಗಳು:
* 2014ರ ನಂತರ ಸ್ಥಿರ ಸರ್ಕಾರವಿದ್ದ ಕಾರಣ ನೀತಿ-ನಿರೂಪಣೆ, ಅನುಷ್ಠಾನದಲ್ಲಿ ಹೆಚ್ಚು ಸ್ಪಷ್ಟತೆ ಸಾಧ್ಯವಾಗಿದೆ
* ಐತಿಹಾಸಿಕವಾಗಿ ಭಾರತ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿತ್ತು. ವಸಾಹುತಶಾಹಿ ಪರಿಣಾಮವಾಗಿ ನಮ್ಮ ಶಕ್ತಿಯು ಕುಂದಿತ್ತು
* ವಿಶ್ವಸಂಸ್ಥೆಯಲ್ಲಿ ಕಾಲಕ್ಕೆ ತಕ್ಕಂತೆ ಸುಧಾರಣೆ ಅಗತ್ಯವಿದೆ. ಎಲ್ಲ ದೇಶಗಳ ಧ್ವನಿಯಾಗಿ ವಿಶ್ವಸಂಸ್ಥೆ ಕಾರ್ಯನಿರ್ವಹಿಸಬೇಕು
* ಅಭಿವೃದ್ಧಿ ಹೊಂದುತ್ತಿರುವ ಅನೇಕ ರಾಷ್ಟ್ರಗಳು ಸಾಲದ ಸುಳಿಗೆ ಸಿಲುಕಿರುವುದು ಕಳವಳಕಾರಿ ವಿಷಯ. ಇಂತಹ ದೇಶಗಳು ಈಗ ವಿತ್ತೀಯ ಶಿಸ್ತಿಗೆ ಮಹತ್ವ ನೀಡುತ್ತಿವೆ
* ವಿತ್ತೀಯ ಶಿಸ್ತು ಅಗತ್ಯ. ಬೇಜವಾಬ್ದಾರಿಯ ಹಣಕಾಸು ನೀತಿ ಹಾಗೂ ಜನಪ್ರಿಯ ಯೋಜನೆಗಳು ಅಲ್ಪಾವಧಿಯಲ್ಲಿ ರಾಜಕೀಯವಾಗಿ ಫಲ ನೀಡಬಹುದು. ಆದರೆ, ದೀರ್ಘಾವಧಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಬಹು ದೊಡ್ಡ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ರಾಜ್ಯಗಳು ಹಣಕಾಸು ಶಿಸ್ತು ಕುರಿತು ಹೆಚ್ಚು ಎಚ್ಚರವಹಿಸಬೇಕು
* ಭಾರತೀಯರ ಜೀವನ ಗುಣಮಟ್ಟ ಇತರ ದೇಶಗಳಿಗೆ ಸಮಾನವಾಗಿರಲಿದೆ. ನಮ್ಮ ಸಂಸ್ಕೃತಿ ಮತ್ತು ಪರಿಸರವನ್ನು ಸಂರಕ್ಷಿಸಿಕೊಂಡೇ ನಾವು ಈ ಗುರಿ ಸಾಧಿಸುತ್ತೇವೆ
* ಆಫ್ರಿಕಾ ಒಕ್ಕೂಟಕ್ಕೆ ಜಿ-20ಯ ಪೂರ್ಣಪ್ರಮಾಣದ ಸದಸ್ಯತ್ವ ನೀಡಬೇಕು ಎಂಬುದು ಭಾರತದ ಒತ್ತಾಸೆ. ಪ್ರತಿಯೊಂದು ದೇಶಕ್ಕೆ, ಪ್ರತಿಯೊಬ್ಬರ ಧ್ವನಿಗೆ ಪ್ರಾತಿನಿಧ್ಯ ಸಿಗದ ಹೊರತು ಮನುಕುಲದ ಭವಿಷ್ಯಕ್ಕಾಗಿ ರೂಪಿಸುವ ಯಾವುದೇ ಯೋಜನೆ ಯಶಸ್ಸು ಕಾಣುವುದಿಲ್ಲ ಎಂಬುದು ಭಾರತದ ದೃಢ ನಂಬಿಕೆ.