ಕುಂಬಳೆ: ಉಪ್ಪಳ ಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯ ಅಭಿವೃದ್ಧಿಯನ್ನು ಬುಡಮೇಲುಗೊಳಿಸಲು ಕೆಲವು ಕೇಂದ್ರಗಳ ನಡೆಯನ್ನು ವಿರೋಧಿಸಿ ಮಂಗಲ್ಪಾಡಿ ಜನಕೀಯ ವೇದಿಕೆಯು ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧಋಇಸಿದೆ. ಇದರ ಅಂಗವಾಗಿ ಅಕ್ಟೋಬರ್ 18 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಸ್ಪತ್ರೆ ಎದುರು ಧರಣಿ ನಡೆಸುವುದಾಗಿ ವೇದಿಕೆಯ ಪದಾಧಿಕಾರಿಗಳು ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.
ಆಸ್ಪತ್ರೆಯ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಜನಕೀಯ ವೇದಿಕೆ ಕಳೆದ ಮೂರೂವರೆ ವರ್ಷಗಳಿಂದ ಹೋರಾಟ ನಡೆಸುತ್ತಿದೆ. 2020ರ ಸೆಪ್ಟೆಂಬರ್ನಲ್ಲಿ 19 ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ನಡೆಸಲಾಯಿತು. ಈ ಮಧ್ಯೆ ಅಂದಿನ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಮಧ್ಯಪ್ರವೇಶಿಸಿ ಸರ್ಕಾರದಿಂದ ನೆರವಿನ ಘೋಷಣೆ ಮಾಡಿಸುವುದಾಗಿ ಧರಣಿ ಸಮಿತಿ ಮುಖಂಡರಿಗೆ ಭರವಸೆ ನೀಡಿದ್ದರಿಂದ ಧರಣಿ ಅಂತ್ಯಗೊಂಡಿತು. ಆದರೆ ಬಳಿಕ ಆಸ್ಪತ್ರೆಯ ಪ್ರಗತಿ ಮರೀಚಿಕೆಯಾಗಿಯೇ ಉಳಿಯಿತು.
ಇದರ ಬೆನ್ನಲ್ಲೇ ಕೆ.ಐ.ಎಫ್.ಬಿ.(ಕಿಪ್ಬಿ: ಕೇರಳ ಇನ್ಪ್ರಾಸ್ಟ್ರಶ್ಚರ್ ಇನ್ವೆಸ್ಟ್ ಮೆಂಟ್ ಫಂಡ್ ಬೋರ್ಡ್) ಗೆ ಸೇರಿಸಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ 17 ಕೋಟಿ ರೂ.ಗಳ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ನಂತರ ಸರ್ಕಾರ 13.5 ಕೋಟಿ ಮಂಜೂರು ಮಾಡಿತ್ತು. ಹಳೆ ಕಟ್ಟಡ ಕೆಡವಿ ಮಣ್ಣು ಪರೀಕ್ಷೆ ನಡೆಸಿದ್ದು ಬಿಟ್ಟರೆ ಮುಂದಿನ ಕಾಮಗಾರಿ ನಡೆದಿಲ್ಲ. ನಿಧಿ ಲಭ್ಯವಾಗಿ ವರ್ಷಗಳೇ ಕಳೆದರೂ ಈ ಬಗ್ಗೆ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಬಂದಿಲ್ಲ. ಇಲ್ಲಿಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಪಡೆಯಲು ಅಧಿಕಾರಿಗಳು ಅವಕಾಶ ಕಲ್ಪಿಸಿ ಕಿಪ್ಬಿ ಹಣ ಬಳಸಿಕೊಂಡು ಆಸ್ಪತ್ರೆ ಅಭಿವೃದ್ಧಿ ಪಡಿಸಬೇಕು ಎಂದು ಜನಕೀಯ ವೇದಿಕೆ ಆಗ್ರಹಿಸಿದೆ.
ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿ.ಎಚ್.ಸಿ.) ಆಡಳಿತ ಮಂಡಳಿ ತಾಲೂಕು ಆಸ್ಪತ್ರೆಯಾಗಿ ರೂಪುಗೊಂಡಿದ್ದು ಬಿಟ್ಟರೆ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಮಾತ್ರ ಚಿಕಿತ್ಸೆ ದೊರೆಯುತ್ತಿದೆ. ಜನ ಸಾಮಾನ್ಯರು ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ಸ್ಥಿತಿ ಮುಂದುವರಿದಿದೆ. ಕೋವಿಡ್ ವೇಳೆ ಅಂತರ್ ರಾಜ್ಯ ಗಡಿ ಮುಚ್ಚಲ್ಪಟ್ಟಾಗ ಚಿಕಿತ್ಸೆ ದೊರೆಯದೆ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜನಪರ ವೇದಿಕೆಯ ಪದಾಧಿಕಾರಿಗಳು ನೆನಪಿಸಿದರು. ಈ ಪರಿಸ್ಥಿತಿ ಇನ್ನಾದರೂ ಬದಲಾಗಬೇಕು.ಅಧಿಕೃತರು ಕಣ್ತೆರೆಯ ಬೇಕು ಎಂದು ಜನಕೀಯ ವೇದಿಕೆಯ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜನಕೀಯ ವೇದಿಕೆ ಅಧ್ಯಕ್ಷ ಅಬ್ದುಲ್ ಕರೀಂ ಪೂನಾ, ಸಂಚಾಲಕ ಅಬು ತಮಾಮ್, ಅಬು ರಾಯಲ್, ಸತ್ಯನ್ ಸಿ.ಉಪ್ಪಳ, ಮಹ್ಮದ್ ಕೈಕಂಬ, ಸಿದ್ದೀಕ್ ಕೈಕಂಬ, ಅಬ್ದುಲ್ಲ ಅತ್ತಾರ್, ಅಶ್ರಫ್ ಎಂ, ಜೈನುದ್ದೀನ್ ಅಡ್ಕ ಮಾಹಿತಿ ನೀಡಿದರು.

.jpg)
