ಮಂಜೇಶ್ವರ: ವಿದ್ಯಾರ್ಥಿಗಳ ವೈಜ್ಞಾನಿಕ,ತಂತ್ರಜ್ಞಾನ, ಸಾಮಾಜಿಕ,ಮತ್ತು ಕಲಾನೈಪುಣ್ಯ ಪ್ರತಿಭೆಗಳನ್ನು ಒರೆಗೆ ಹಚ್ಚುವ ಹಾಗೂ ಗುರುತಿಸುವ ವಿಜ್ಞಾನೋತ್ಸವ ನಮ್ಮ ದೇಶದ ಭವಿಷ್ಯದ ವಿಜ್ಞಾನಿಗಳನ್ನು ರೂಪಿಸಬಹುದಾಗಿದೆ. ವಿಜ್ಞಾನೋತ್ಸವ ಎಂದಾಗ ನೆನಪಾಗುವುದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಗ್ರಾಮೀಣ ಪ್ರತಿಭೆಯಾಗಿ ಅವರು ವಿಜ್ಞಾನಿಯಾಗಿ ಬೆಳೆದು ಬಂದ ಬಗೆ ಬೆರಗು ಮೂಡಿಸುವಂತದ್ದು. ಅಂತಹ ವಿಜ್ಞಾನಿಗಳ ರೂಪೀಕರಣಕ್ಕೆ ಇಂತಹ ಸ್ಪರ್ಧೆಗಳು ವೇದಿಕೆಯಾಗಲಿವೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ತಿಳಿಸಿದರು.
ಅವರು ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವದ ಉದ್ಘಾಟನೆಯನ್ನು ನಿರ್ವಹಿಸಿ ಮಾತನಾಡುತ್ತಿದ್ದರು.
ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನ ಮೊಂತೆರೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ವರ್ಕಾಡಿ ಡಿವಿಜನ್ ಸದಸ್ಯೆ ಕಮಲಾಕ್ಷಿ .ಕೆ.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಂಜೇಶ್ವರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮೊಹಮ್ಮದ್ ಸಿದ್ದಿಕ್.ಎಂ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಸಫಾ ಫಾರೂಕ್,ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯರುಗಳಾದ ರಾಜೇಶ್.ಎಂ, ಹಾಜಿರಾ ಮೂಸ, ಮುಖ್ಯೋಪಾಧ್ಯಾಯ ಫಾರಂನ ಅಧ್ಯಕ್ಷ ಶ್ಯಾಮ ಭಟ್, ಪೂರ್ವವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ರಹೆಮಾನ್ ಉದ್ಯಾವರ, ನಿವೃತ್ತ ಶಿಕ್ಷಕ ಈಶ್ವರ ಮಾಸ್ತರ್, ಹಿರಿಯ ಶಿಕ್ಷಕಿ ಅಮಿತಾ ಶುಭಹಾರೈಸಿದರು. ಸಂಘಟನಾ ಸಮಿತಿಯ ಸಂಚಾಲಕರೂ, ಶಾಲಾ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ. ಜಿ, ವಿ.ಎಚ್.ಎಸ್.ಸಿ.ಪ್ರಾಚಾರ್ಯ ಶಿಶುಪಾಲನ್, ಶಿಕ್ಷಕರುಗಳಾದ ಅಶ್ರಫ್, ದಿವಾಕರ ಬಲ್ಲಾಳ್, ಕವಿತಾ ಮೊದಲಾದವರು ನೇತೃತ್ವ ನೀಡಿದ್ದರು.