ಕುಂಬಳೆ: ಕಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ ಕ್ಷೇತ್ರ ಜೀರ್ಣೋದ್ದಾರ ಹಿನ್ನೆಲೆಯಲ್ಲಿ ಕುಡಾಲು-ಬಾಡೂರು ಗ್ರಾಮಗಳ ಭಕ್ತರ ಸಭೆ ನಡೆಯಿತು.
ಶಾಂಭವಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೊಕ್ತೇಸರರಾದ ನೆರಿಯ ಹೆಗಡೆ ಶ್ರೀ ಲಕ್ಷ್ಮೀ ನಾರಾಯಣ ಭಟ್, ರವಿಶಂಕರ ಭಟ್ ಎಡಕ್ಕಾನ ಹಾಗೂ ಕ್ಷೇತ್ರದ ಸೇವಾ ಸಮಿತಿಯ ಅಧ್ಯಕ್ಷ ಕೃಷ್ಣ ಭಟ್ ಮರುವಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರವಿ ಶಂಕರ್ ಭಟ್ ಅವರು ನ. 2 ರಂದು ನಡೆಯಲಿರುವ ಅನುಜ್ಞಾ ಕಲಶ ಹಾಗೂ ಜಟಾಧಾರಿ, ಗಣಪತಿ,ಶಾಸ್ತಾರ ದೇವರುಗಳ ಬಾಲಾಲಯ ಪ್ರತಿಷ್ಠೆ ಕುರಿತು ಮಾಹಿತಿ ನೀಡಿದರು. ಸುತ್ತು ಗೋಪುರ, ಪಾಕಶಾಲೆ, ವಸಂತಕಟ್ಟೆ ಮತ್ತಿತರ ಪುನರ್ನಿರ್ಮಾಣ ಬಗ್ಗೆ ವಿವರಿಸಿದರು.
ಲಕ್ಷ್ಮೀ ನಾರಾಯಣ ಭಟ್ ಅವರು ಜೀರ್ಣೋದ್ಧಾರ ಕಾಮಗಾರಿಗಳ ಬಗ್ಗೆ ಇನ್ನಷ್ಟು ವಿಷಯ ತಿಳಿಸಿದರು. ಶ್ರೀ ಕೃಷ್ಣ ಭಟ್ ಜೀರ್ಣೋದ್ಧಾರ ಕಾಮಗಾರಿಗಳ ಯಶಸ್ಸಿಗೆ ಊರ ಪರವೂರ ಭಕ್ತರ ನೆರವು ಕೋರಿದರು. ಮಧ್ಯಾಹ್ನದ ಮಹಾ ಪೂಜೆಯ ಸಂದರ್ಭ ಸಮಸ್ತ ಭಕ್ತರ ಪರವಾಗಿ ವಿಶೇಷ ಕಾರ್ತಿಕ ಪೂಜೆ ಸೇವೆ ಸಲ್ಲಿಸಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಸೇವಾ ಸಮಿತಿ ಕಾರ್ಯದರ್ಶಿ ಅಶೋಕ್ ಬಾಡೂರು ವಂದಿಸಿದರು. ವೀಣಾ ಶೆಟ್ಟಿ ಆನೆಬಾಗಿಲು ಪ್ರಾರ್ಥಿಸಿದರು. ನೂರಾರು ಭಕ್ತರು ಭಾಗವಹಿಸಿದ್ದರು.