ವಾಷಿಂಗ್ಟನ್: ಖಾಲಿಸ್ತಾನ ಪರ ಹೋರಾಟಗಾರ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂಬ ಕೆನಡಾ ಸರ್ಕಾರದ ಆರೋಪ ಗಂಭೀರವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದು ಅಮೆರಿಕ ಪ್ರತಿಪಾದಿಸಿದೆ.
ವಾಷಿಂಗ್ಟನ್: ಖಾಲಿಸ್ತಾನ ಪರ ಹೋರಾಟಗಾರ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂಬ ಕೆನಡಾ ಸರ್ಕಾರದ ಆರೋಪ ಗಂಭೀರವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದು ಅಮೆರಿಕ ಪ್ರತಿಪಾದಿಸಿದೆ.
ಖಾಲಿಸ್ತಾನ ಟೈಗರ್ ಪೋರ್ಸ್ (ಕೆಟಿಎಫ್) ಮುಖ್ಯಸ್ಥ ನಿಜ್ಜರ್ನನ್ನು ಭಾರತವು ಉಗ್ರನೆಂದು ಘೋಷಿಸಿತ್ತು.
ಕಳೆದ ವಾರ ಅಮೆರಿಕಕ್ಕೆ ಭೇಟಿ ನೀಡಿದ್ದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಲ್ಲಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಜೊತೆ, ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಚರ್ಚೆ ಕೂಡ ನಡೆಸಿದ್ದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈಟ್ಹೌಸ್ನ ರಾಷ್ಟ್ರೀಯ ಭದ್ರತಾ ಮಂಡಳಿಯ (ಕಾರ್ಯತಂತ್ರ ಸಂವಹನ) ಸಂಯೋಜಕ ಜಾನ್ ಕಿರ್ಬಿ, 'ನಿಜ್ಜರ್ ಹತ್ಯೆ ಕುರಿತು ಭಾರತದ ಮೇಲಿನ ಆರೋಪ ಗಂಭೀರ ಸ್ವರೂಪದ್ದಾಗಿದೆ. ಈ ಕುರಿತು ತನಿಖೆ ನಡೆಸುವ ಅಗತ್ಯವಿದೆಯೆಂದು ಈ ಹಿಂದೆಯೇ ನಾವು ಹೇಳಿದ್ದೇವೆ. ತನಿಖೆಗೆ ಭಾರತವು ಸಹಕಾರ ಕೂಡ ನೀಡಬೇಕಿದೆ' ಎಂದರು.
'ಈ ವಿಷಯಕ್ಕೆ ಸಂಬಂಧಿಸಿ ತಲೆದೋರಿರುವ ದ್ವಿಪಕ್ಷೀಯ ಬಾಂಧವ್ಯದ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಉಭಯ ದೇಶಗಳಿಗೆ ಬಿಟ್ಟಿದ್ದೇವೆ' ಎಂದು ಹೇಳಿದರು.
ತನಿಖೆ ಕಷ್ಟಕರ:
ಪ್ರತ್ಯೇಕವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ್ ಪಟೇಲ್, 'ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವುದು ಕೆನಡಾಕ್ಕೆ ಕಷ್ಟಕರ. ಹಾಗಾಗಿ, ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಈಗಾಗಲೇ ನಾವು ಭಾರತ ಸರ್ಕಾರಕ್ಕೆ ಹೇಳಿದ್ದೇವೆ' ಎಂದರು.