ಛತ್ತೀಸಗಢ: ಮನೆಯಿಂದ ಮತ: ಛತ್ತೀಸಗಢದಲ್ಲಿ 6,400ಕ್ಕೂ ಹೆಚ್ಚು ಮತದಾರರು ಮನೆಯಿಂದ ಮತ ಚಲಾಯಿಸುವ ಸೌಲಭ್ಯವನ್ನು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. 80 ವರ್ಷಕ್ಕೂ ಹೆಚ್ಚಿನ ವಯಸ್ಸಿನವರು ಮತ್ತು ಶೇ 40 ಕ್ಕೂ ಹೆಚ್ಚಿನ ಅಂಗವೈಕಲ್ಯ ಹೊಂದಿರುವವರು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಚುನಾವಣಾ ಆಯೋಗ ಹೇಳಿದೆ.
'₹4000 ಲಾಭ': ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಮಾಜಿಕ ಪಿಂಚಣಿ, ಅಡುಗೆ ಅನಿಲ ದರದ ಉಳಿತಾಯ ಮತ್ತು ಸರ್ಕಾರಿ ಬಸ್ಗಳಲ್ಲಿ ಉಚಿತ ಪಯಣದ ಮೂಲಕ ಮಹಿಳೆಯರು ಮಾಸಿಕ ₹ 4,000 ಲಾಭ ಪಡೆಯಬಹುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಂಬಟಿಪಲ್ಲಿಯಲ್ಲಿ ಅವರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.
ಐ.ಟಿ ಅಧಿಕಾರಿಗಳಿಂದ ಶೋಧ: ತೆಲಂಗಾಣದಲ್ಲಿ ಮಹೇಶ್ವರಂ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಲಕ್ಷ್ಮ ರೆಡ್ಡಿ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ಗುರುವಾರ ಶೋಧ ಕೈಗೊಂಡರು ಎಂದು ಮೂಲಗಳು ಹೇಳಿವೆ.
ರಾಜ್ಯದ ಆಡಳಿತಾರೂಢ ಬಿಆರ್ಎಸ್ ಮತ್ತು ಕೇಂದ್ರಸರ್ಕಾರದಲ್ಲಿನ ಬಿಜೆಪಿ, ಇಂತಹ ಕೃತ್ಯಗಳ ಮೂಲಕ ಕಾಂಗ್ರೆಸ್ ಅಭ್ಯರ್ಥಿಯ ಸ್ಥೈರ್ಯಗೆಡಿಸಲು ಯತ್ನಿಸುತ್ತಿವೆ ಎಂದು ಟಿಪಿಸಿಸಿ ವಕ್ತಾರ ಗೌರಿ ಸತೀಶ್ ಆರೋಪಿಸಿದ್ದಾರೆ.
ಕಲ್ಲು ತೂರಾಟ: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಚಿತ್ರಕೂಟ ಕ್ಷೇತ್ರದಿಂದ ಮರುಆಯ್ಕೆ ಬಯಸಿರುವ ಕಾಂಗ್ರೆಸ್ ಶಾಸಕ ನಿಲಾಂಶು ಚತುರ್ವೇದಿ ಅವರ ಬೆಂಗಾವಲು ವಾಹನದ ಮೇಲೆ ಸಾತ್ನಾ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಕಲ್ಲುತೂರಾಟ ನಡೆದಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ.
ನಕ್ಸಲರ ಬೆದರಿಕೆ: ಛತ್ತೀಸಗಢದ ಗ್ರಾಮದಲ್ಲಿ ನಕ್ಸಲರು ಪೊಲೀಸ್ ಮಾಹಿತಿದಾರ ಎಂಬ ಆರೋಪದ ಮೇಲೆ 40 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ. ಅಲ್ಲದೆ ಇದೇ 7ರ ಚುನಾವಣೆಯಲ್ಲಿ ಮತಗಟ್ಟೆಗಳಿಗೆ ಭೇಟಿ ನೀಡದಂತೆ ಚುನಾವಣಾ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಜೆಪಿಗೆ ಸೇರ್ಪಡೆ: ತೆಲಂಗಾಣದ ಬಿಆರ್ಎಸ್ ಶಾಸಕ ರಾಥೋಡ್ ಬಾಪು ರಾವ್ ಮತ್ತು ಕಾಂಗ್ರೆಸ್ ನಾಯಕ ಚಲಮಲ ಕೃಷ್ಣರೆಡ್ಡಿ ಅವರು ಬುಧವಾರ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಡ್ಡಾ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆದಿದೆ.
ದೇವಸ್ಥಾನಕ್ಕೆ ಮೊರೆ: ಚುನಾವಣೆ ವೇಳೆ ರಾಜಸ್ಥಾನದಲ್ಲಿ ಉಮರೈ ಗ್ರಾಮದ ತ್ರಿಪುರ ಸುಂದರಿ ದೇವಸ್ಥಾನವು ರಾಜಕಾರಣಿಗಳ ಪ್ರಿಯವಾದ ಸ್ಥಳವಾಗುತ್ತದೆ. ವಸುಂಧರಾ ರಾಜೆ ಅವರೂ ಈ ದೇವತೆಯ ದೃಢ ನಂಬಿಕಸ್ಥೆ. ಗ್ರಾಮಗಳ ಮುಖ್ಯಸ್ಥರಿಂದ ಸಚಿವರುಗಳವರೆಗೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಈ ದೇವಾಲಯಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಾರೆ.
ಚೌಹಾಣ್ ಟೀಕೆ: 'ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ ಕಮಲ್ನಾಥ್ ಆಡಳಿತದ ಮಾದರಿ ಬರಲಿದೆ ಎಂದು ಅವರು ಹೇಳಿಕೊಳ್ಳುತ್ತಾರೆ. ಕಮಲ್ನಾಥ್ ಮಾದರಿ ಎಂದರೆ ಏನು? ಅದು ಭ್ರಷ್ಟಾಚಾರ, ಅಪರಾಧ ಮತ್ತು ಲಂಚದ ಮಾದರಿ' ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪೃಥ್ವಿಪುರದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದರು.