ಮುಳ್ಳೇರಿಯ: ಪೆರಿಯ ಆಲಕ್ಕೋಡು ಗೋಕುಲಂ ಗೋಶಾಲಾ ದೀಪಾವಳಿ ಸಂಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹಿರಿಯ ನೃತ್ಯ ಕಲಾವಿದೆ ಡಾ. ಪದ್ಮಾಸುಬ್ರಹ್ಮಣ್ಯಂ ಅವರಿಗೆ ಪರಂಪರಾ ವಿದ್ಯಾಪೀಠದ ನಾಟ್ಯಭೂಷಣ ಪ್ರಶಸ್ತಿಯನ್ನು ನೀಡಿ ಆಶೀರ್ವದಿಸಿದರು. ಪ್ರಶಸ್ತಿಯನ್ನು ಸ್ವೀಕರಿಸಿ ಡಾ.ಪದ್ಮಾಸುಬ್ರಹ್ಮಣ್ಯ ಮಾತನಾಡಿ ಕಲೆಯೇ ಸಂಸ್ಕøತಿಯ ತಳಹದಿ. ಇಂದಿನ ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ ಎಂದು ತಿಳಿಸಿದರು. ಗೋಶಾಲೆಯಿಂದ ದೊರೆತ ಪ್ರಶಸ್ತಿ ಶ್ರೇಷ್ಠವಾದುದು ಎಂದರು. ಗೋಶಾಲೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಸಹಕರಿಸುವುದಾಗಿ ಭರವಸೆ ನೀಡಿದರು.
ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್ ಅವರಿಗೆ ಗುರುರತ್ನ ಪ್ರಶಸ್ತಿ, ಗೋಕುಲ್ ಅಲಂಗೋಡ್ ಮತ್ತು ವಿಭಾ ರಾಜೀವ್ ಅವರಿಗೆ ಯುವ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪರಂಪರಾ ವಿದ್ಯಾಪೀಠದ ಆಚಾರ್ಯರಾದ ವಿಷ್ಣು ಪ್ರಸಾದ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು, ಅಜಿತ್ ಕುಮಾರ್ ವರ್ಮಾ, ಶಂಕರನಾರಾಯಣ ಜೋಯಿಸ್, ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಮುರಳೀಧರನ್ ನಂಬಿಯಾರ್, ಖ್ಯಾತ ಸಂಸ್ಕೃತ ವಿದ್ವಾಂಸ ಕೆ. ಕಣ್ಣನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.