ನವದೆಹಲಿ: ಕ್ರಿಮಿನಲ್ ಕಾನೂನುಗಳಿಗೆ ಬದಲಿಯಾಗಿ ಜಾರಿಗೆ ತರಲು ಉದ್ದೇಶಿಸಿರುವ ಮೂರು ಮಸೂದೆಗಳಿಗೆ ಸಂಬಂಧಿಸಿದ ವರದಿಯನ್ನು ಉಪರಾಷ್ಟ್ರಪತಿಯೂ ಆದ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರಿಗೆ ಶುಕ್ರವಾರ ಸಲ್ಲಿಸಲಾಗಿದೆ.
0
samarasasudhi
ನವೆಂಬರ್ 11, 2023
ನವದೆಹಲಿ: ಕ್ರಿಮಿನಲ್ ಕಾನೂನುಗಳಿಗೆ ಬದಲಿಯಾಗಿ ಜಾರಿಗೆ ತರಲು ಉದ್ದೇಶಿಸಿರುವ ಮೂರು ಮಸೂದೆಗಳಿಗೆ ಸಂಬಂಧಿಸಿದ ವರದಿಯನ್ನು ಉಪರಾಷ್ಟ್ರಪತಿಯೂ ಆದ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರಿಗೆ ಶುಕ್ರವಾರ ಸಲ್ಲಿಸಲಾಗಿದೆ.
'ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯ ಅಧ್ಯಕ್ಷ ಬ್ರಿಜ್ ಲಾಲ್ ಅವರು ಧನಕರ್ ಅವರನ್ನು ಭೇಟಿಯಾಗಿ ಮೂರು ವರದಿಗಳನ್ನು ಸಲ್ಲಿಸಿದ್ದಾರೆ' ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರ ಸಚಿವಾಲಯವು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಪ್ರಕಟಿಸಿದೆ.
' ಇಂಡಿಯನ್ ಪೀನಲ್ ಕೋಡ್ (ಭಾರತೀಯ ದಂಡ ಸಂಹಿತೆ)' ಬದಲಿಗೆ 'ಭಾರತೀಯ ನ್ಯಾಯ ಸಂಹಿತೆ ಮಸೂದೆ-2023', 'ಕ್ರಿಮಿನಲ್ ಪ್ರೊಸೀಜರ್ ಕೋಡ್ (ಅಪರಾಧ ಪ್ರಕ್ರಿಯಾ ಸಂಹಿತೆ)' ಬದಲಿಗೆ 'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆ-2023' ಮತ್ತು 'ಇಂಡಿಯನ್ ಎವಿಡನ್ಸ್ ಆಯಕ್ಟ್ (ಭಾರತೀಯ ಸಾಕ್ಷ್ಯ ಕಾಯ್ದೆ)' ಬದಲಿಗೆ 'ಭಾರತೀಯ ಸಾಕ್ಷ್ಯ ಮಸೂದೆ-2023' ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಸ್ಟ್ನಲ್ಲಿ ಲೋಕಸಭೆಯಲ್ಲಿ ಮಂಡಿಸಿದ್ದರು. ಈ ಮಸೂದೆಗಳನ್ನು ಸಂಸದೀಯ ಸಮಿತಿಯ ಪರಿಶೀಲನೆಗೆ ನೀಡಬೇಕು ಎಂದು ಅಮಿತ್ ಶಾ ಸ್ಪೀಕರ್ ಅವರನ್ನು ಕೋರಿದ್ದರು.
'ಪ್ರಸ್ತುತ ಇರುವ ಕಾನೂನುಗಳು ವಸಾಹತುಶಾಹಿ ಪರಂಪರೆಗೆ ಸೇರಿದವು. 'ಬ್ರಿಟಿಷ್ ರಾಜ್'ನ ಸೂಚಕವಾಗಿವೆ. ಅವು ಕೇವಲ ಶಿಕ್ಷೆ ನೀಡುವುದರತ್ತ ಮಾತ್ರ ಕೇಂದ್ರೀಕರಿಸಿದ್ದವು. ಹೊಸ ಕಾನೂನುಗಳು ನ್ಯಾಯಕ್ಕೆ ಪ್ರಾಧಾನ್ಯತೆ ನೀಡಿವೆ' ಎಂದು ಹೇಳಿದ್ದರು.
ಈ ಮೂರು ಮಸೂದೆಗಳನ್ನು ಪರಿಶೀಲಿಸಲು ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಗೆ ಮೂರು ತಿಂಗಳ ಸಮಯ ನೀಡಲಾಗಿತ್ತು.