ಬ್ಯಾಂಕಾಕ್: ಇಸ್ರೇಲ್-ಹಮಾಸ್ ಸಂಘರ್ಷದ ವೇಳೆ ಗಾಜಾದಲ್ಲಿ ಮೃತಪಟ್ಟ ಸಹೋದ್ಯೋಗಿಗಳ ಗೌರವಾರ್ಥವಾಗಿ ಏಷ್ಯಾದಾದ್ಯಂತ ಇರುವ ವಿಶ್ವಸಂಸ್ಥೆಯ ಕಚೇರಿಗಳ ಎದುರು ಧ್ವಜಗಳನ್ನು ಸೋಮವಾರ ಅರ್ಧಕ್ಕೆ ಇಳಿಸಲಾಯಿತು.
ಪ್ಯಾಲೆಸ್ಟೀನ್ ನಾಗರಿಕರಿಗೆ ಪರಿಹಾರ ಕಲ್ಪಿಸಲು ಕೆಲಸ ಮಾಡುತ್ತಿರುವ ವಿಶ್ವಸಂಸ್ಥೆಯ ಏಜೆನ್ಸಿ ಯುಎನ್ಆರ್ಡಬ್ಲ್ಯುಎ, ಸಂಘರ್ಷದ ಸಮಯದಲ್ಲಿ ವಿಶ್ವಸಂಸ್ಥೆಯ ನೂರಕ್ಕೂ ಹೆಚ್ಚು ಸಿಬ್ಬಂದಿ ಗಾಜಾದಲ್ಲಿ ಹತರಾಗಿದ್ದಾರೆ ಎಂದು ಶುಕ್ರವಾರ ಹೇಳಿತ್ತು.
ಇದರ ಬೆನ್ನಲ್ಲೇ ಬ್ಯಾಂಕಾಕ್, ಟೊಕಿಯೊ, ಬೀಜಿಂಗ್ನಲ್ಲಿರುವ ಕಚೇರಿ ಎದುರು ಸ್ಥಳೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ ವಿಶ್ವಸಂಸ್ಥೆಯ ಧ್ವಜ ಇಳಿಸಿ ಗೌರವ ಸೂಚಿಸಲಾಗಿದೆ.
ಹಮಾಸ್ ಬಂಡುಕೋರರು ದಕ್ಷಿಣ ಇಸ್ರೇಲ್ನಲ್ಲಿ ಅಕ್ಟೋಬರ್ 7ರಂದು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ, ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸುತ್ತಿದೆ.ಹಮಾಸ್ ದಾಳಿಯಲ್ಲಿ 1,200ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ನಡೆಸಿದ ಪ್ರತಿದಾಳಿಯಲ್ಲಿ 11,000ಕ್ಕೂ ಅಧಿಕ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಹಮಾಸ್ ಹೇಳಿದೆ.
ವಿಶ್ವಸಂಸ್ಥೆ ನಿರ್ಣಯಕ್ಕೆ ಭಾರತ ಬೆಂಬಲ
ಪ್ಯಾಲೆಸ್ಟೀನ್ನ ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲ್ನ ವಸಾಹತು ಚಟುವಟಿಕೆ ಖಂಡಿಸಿ ವಿಶ್ವಸಂಸ್ಥೆಯು, ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಿದೆ. ಗುರುವಾರ ಮಂಡನೆಯಾದ ಈ ನಿರ್ಣಯದ ಪರ ಭಾರತ ಸೇರಿದಂತೆ 145 ರಾಷ್ಟ್ರಗಳು ಮತ ಚಲಾಯಿಸಿವೆ. ಇದರ ವಿರುದ್ಧ ಏಳು ದೇಶಗಳು ಮತ ಚಲಾಯಿಸಿವೆ. 18 ದೇಶಗಳು ದೂರ ಉಳಿದಿವೆ.
'ಪೂರ್ವ ಜೆರುಸಲೇಂ ಹಾಗೂ ಸಿರಿಯಾದ ಗೋಲನ್ ಸೇರಿದಂತೆ ಪ್ಯಾಲೆಸ್ಟೀನ್ನ ಆಕ್ರಮಿತ ಪ್ರದೇಶದಲ್ಲಿ ಇಸ್ರೇಲ್ ವಸಾಹತು ಚಟುವಟಿಕೆ' ಶೀರ್ಷಿಕೆಯಡಿ ಕರಡು ನಿರ್ಣಯ ಸಿದ್ಧಪಡಿಸಲಾಗಿತ್ತು. ವಿಶ್ವಸಂಸ್ಥೆಯ ವಿಶೇಷ ರಾಜಕೀಯ ಹಾಗೂ ವಸಾಹತು ವಿಮೋಚನಾ ಸಮಿತಿಯು ಇದಕ್ಕೆ ಅನುಮೋದನೆ ನೀಡಿತ್ತು.