ನವದೆಹಲಿ: ನಿರ್ಲಕ್ಷ್ಯದಿಂದ ರೋಗಿಗಳು ಸಾವಿಗೀಡಾಗುವ ಪ್ರಕರಣಗಳಲ್ಲಿ ವೈದ್ಯರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡುವ ಅವಕಾಶವನ್ನು ಹೊಸ ಅಪರಾಧ ಮಸೂದೆಗಳಲ್ಲಿ ತೆಗೆದುಹಾಕಲಾಗಿದೆ.
ನೂತನ ಅಪರಾಧ ಮಸೂದೆಗಳ ಚರ್ಚೆ ವೇಳೆ ಲೋಕಸಭೆಯಲ್ಲಿ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ, 'ಈಗ, ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿ ಮೃತಪಟ್ಟರೆ ಅದನ್ನು ಕ್ರಿಮಿನಲ್ ನಿರ್ಲಕ್ಷ್ಯಎಂದು ಪರಿಗಣಿಸಲಾಗುತ್ತದೆ.
ಭಾರತೀಯ ವೈದ್ಯಕೀಯ ಆಯೋಗದ ಮನವಿ ಮೇರೆಗೆ ಈ ಬದಲಾವಣೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಭಾರತೀಯ ದಂಡ ಸಂಹಿತೆಗೆ (ಐಪಿಸಿ) ಬದಲಿಗೆ ತರಲಾಗಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ ಈ ತಿದ್ದುಪಡಿ ಮಾಡಲಾಗಿದೆ. ಐಪಿಸಿಯಲ್ಲಿ ವೈದ್ಯರ ಕ್ರಿಮಿನಲ್ ನಿರ್ಲಕ್ಷ್ಯಕ್ಕೆ ಐದು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶ ಇತ್ತು.
ಒಂದು ವೇಳೆ ನೋಂದಾಯಿತ ವೈದ್ಯರಿಂದ ವೈದ್ಯಕೀಯ ಪ್ರಕ್ರಿಯೆ ವೇಳೆ ನಿರ್ಲಕ್ಷ್ಯ ಸಂಭವಿಸಿದರೆ, ಅವರಿಗೆ ಎರಡು ವರ್ಷಗಳವರೆಗೆ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶ ನೂತನ ಭಾರತೀಯ ನ್ಯಾಯ ಸಂಹಿತೆಯಲ್ಲಿ ನೀಡಲಾಗಿದೆ.
ಇದಕ್ಕಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- 2023ರಲ್ಲೂ (ಸಿಆರ್ಪಿಸಿ ಬದಲಿಗೆ ತಂದಿರುವ ಮಸೂದೆ) ತಿದ್ದುಪಡಿಯಲ್ಲಿ ವೈದ್ಯಕೀಯ ನಿರ್ಲಕ್ಷ್ಯವನ್ನು 'ಗಂಭೀರಲ್ಲದ' ಹಾಗೂ 'ಜಾಮೀನು ಸಹಿತ' ಅಪರಾಧ ಎಂದು ಪರಿಗಣಿಸಲಾಗಿದೆ.


