ಆನಂದ್: 'ಆರ್ಥಿಕ ಅಭಿವೃದ್ಧಿಯ ಗುರಿ ಸಾಧನೆಗೆ ಪೂರಕವಾಗಿ ಉನ್ನತ ಶಿಕ್ಷಣಕ್ಕೆ ದಾಖಲಾಗುವವರ ಅನುಪಾತವನ್ನು 2030ರ ವೇಳೆಗೆ ಶೇ 50ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ' ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ಹೇಳಿದರು.
ಹೆಚ್ಚಿನ ಯುವಜನರು ಉನ್ನತ ಶಿಕ್ಷಣ ಪಡೆಯಬೇಕು ಹಾಗೂ ಕೌಶಲ ಕಾರ್ಯಪಡೆಯ ಭಾಗವಾಗಬೇಕು ಎಂಬುದು ಇದರ ಉದ್ದೇಶ ಎಂದು ಸಚಿವರು ಹೇಳಿದರು.
ಉನ್ನತ ಶಿಕ್ಷಣಕ್ಕೆ ದಾಖಲಾತಿಯ ಅನುಪಾತವನ್ನು 2030ರ ವೇಳೆಗೆ ಶೇ 50ಕ್ಕೆ ಹೆಚ್ಚಿಸಿದರೆ ಅಭಿವೃದ್ಧಿ ರಾಷ್ಟ್ರವಾಗುವುದು ಸಾಧ್ಯ ಎಂದು ಪ್ರತಿಪಾದಿಸಿದರು. ಚಾರೊತರ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಉದ್ದೇಶಿಸಿ ಅವರು ಮಾತನಾಡಿದರು.
'2047ರ ವೇಳೆಗೆ ದೇಶವನ್ನು ಅಭಿವೃದ್ಧಿ ರಾಷ್ಟ್ರವಾಗಿಸುವುದು ಕಾಲ್ಪನಿಕ ಚಿಂತನೆಯಲ್ಲ. ಆ ಗುರಿ ಸಾಧನೆಗೆ ದೇಶ ಬದ್ಧವಾಗಿದೆ. ಪೂರಕವಾಗಿ ಜನರ ಜೀವನ ಗುಣಮಟ್ಟ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು, ಸಾರಿಗೆ ವ್ಯವಸ್ಥೆಯು ಸುಸ್ಥಿರ ಮತ್ತು ಕೈಗೆಟುಕುವ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಹಾಗೂ ಆರ್ಥಿಕ ಅವಕಾಶಗಳ ಲಭ್ಯತೆಯ ಅಂತರ ಕುಗ್ಗಿಸುವುದು ಇದರಲ್ಲಿ ಸೇರಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್ಇಪಿ) ಮಕ್ಕಳಿಗೆ 8ನೇ ತರಗತಿವರೆಗೂ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಲು ಒತ್ತು ನೀಡಲಿದೆ. ಮಾನಸಿಕವಾಗಿ ಪಕ್ವಗೊಳ್ಳುವವರೆಗೂ ಮಾತೃಭಾಷೆಯಲ್ಲಿ ವಿಷಯದ ಸ್ಪಷ್ಟತೆ ಅರಿವಾಗುವುದು ಅಗತ್ಯ ಎಂದು ಹೇಳಿದರು.