ಅಯೋಧ್ಯೆ: ಜನವರಿ 22ರಂದು ರಾಮಮಂದಿರದಲ್ಲಿ ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ನನ್ನ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಕಾರ್ಯಕ್ರಮ ನಡೆದ ದಿನದಿಂದ ಕೆಲವರಿಂದ ನಿಂದನೆ ಮತ್ತು ಫೋನ್ ಕರೆಗಳಲ್ಲಿ ಬೆದರಿಕೆ ಎದುರಿಸುತ್ತಿದ್ದೇನೆ ಎಂದು ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಪಿಟಿಐ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.
ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ವಿವಿಧ ಸಮುದಾಯಗಳು ಮತ್ತು ವಿವಿಧ ಕ್ಷೇತ್ರಗಳ 7,000 ಕ್ಕೂ ಹೆಚ್ಚು ಆಹ್ವಾನಿತ ಅತಿಥಿಗಳು ಭಾಗವಹಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಒಬ್ಬ ವ್ಯಕ್ತಿ ತನಗೆ ಫತ್ವಾ ಹೊರಡಿಸಿದ್ದಾರೆ. ಅದರಲ್ಲಿ ನನ್ನ ಮೊಬೈಲ್ ಫೋನ್ ಸಂಖ್ಯೆಯನ್ನು ನಮೂದಿಸಲಾಗಿದೆ. ಎಲ್ಲಾ ಇಮಾಮ್ಗಳು ಮತ್ತು ಮಸೀದಿ ಅಧಿಕಾರಿಗಳಿಗೆ ನನ್ನನ್ನು ಬಹಿಷ್ಕರಿಸುವಂತೆ ಕೇಳಲಾಗಿದೆ ಎಂದು ಇಲ್ಯಾಸಿ ತಿಳಿಸಿದ್ದಾರೆ.
ನಾನು ಕ್ಷಮೆಯಾಚಿಸಬೇಕು ಮತ್ತು ನನ್ನ ಹುದ್ದೆಗೆ ರಾಜೀನಾಮೆ ನೀಡುವಂತೆ ಫತ್ವಾದಲ್ಲಿ ಸೂಚನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
'ನನಗೆ ಫತ್ವಾ ಹೊರಡಿಸಲು ಯಾವ ಪ್ರೇರೇಪಣೆ ಇದೆ ಎಂಬುದು ಅವರಿಗೇ ಗೊತ್ತು. ರಾಮ ಜನ್ಮಭೂಮಿ ಟ್ರಸ್ಟ್ ಆಹ್ವಾನ ಕಳುಹಿಸಿದಾಗ ಯಾವ ನಿರ್ಧಾರ ಕೈಗೊಳ್ಳಬೇಕೆಂದು ಎರಡು ದಿನಗಳ ಕಾಲ ನಾನು ಯೋಚಿಸಿದ್ದೆ. ಏಕೆಂದರೆ ಅದು ನನ್ನ ಜೀವನದ ದೊಡ್ಡ ನಿರ್ಧಾರವಾಗಿತ್ತು. ನಂತರ, ಕೋಮು ಸೌಹಾರ್ದತೆ, ದೇಶ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರ್ಧಾರ ಕೈಗೊಂಡೆ' ಎಂದು ಇಮಾಮ್ ನುಡಿದಿದ್ದಾರೆ.
ಅಯೋಧ್ಯೆಯ ಜನರು ನಮ್ಮನ್ನು ಸ್ವಾಗತಿಸಿದರು. ಎಲ್ಲಾ ಸಾಧುಗಳು ಮತ್ತು ದಾರ್ಶನಿಕರು ನಮ್ಮನ್ನು ಒಪ್ಪಿಕೊಂಡು ಸಂತೋಷ ವ್ಯಕ್ತಪಡಿಸಿದರು. ದೇವಾಲಯದ ಟ್ರಸ್ಟ್ ಸಹ ಆತ್ಮೀಯವಾಗಿ ಸ್ವಾಗತಿಸಿತು ಎಂದು ಇಲ್ಯಾಸಿ ಹೇಳಿದ್ದಾರೆ.