ನವದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಪ್ರತಿಷ್ಠಾಪನೆಯಾಗಿರುವ ಬೆನ್ನಲ್ಲೇ, ರಾಮಮಂದಿರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಇದೇ ನಗರದ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದವರು ಸಿದ್ಧತೆ ನಡೆಸಿದ್ದಾರೆ.
0
samarasasudhi
ಜನವರಿ 23, 2024
ನವದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಪ್ರತಿಷ್ಠಾಪನೆಯಾಗಿರುವ ಬೆನ್ನಲ್ಲೇ, ರಾಮಮಂದಿರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಇದೇ ನಗರದ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದವರು ಸಿದ್ಧತೆ ನಡೆಸಿದ್ದಾರೆ.
ಮಸೀದಿ ನಿರ್ಮಾಣ ಮೇಲುಸ್ತುವಾರಿ ವಹಿಸಿಕೊಂಡಿರುವ ಇಂಡೊ-ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ನ (ಐಐಸಿಎಫ್) ಅಭಿವೃದ್ಧಿ ಸಮಿತಿಯ ಮುಖ್ಯಸ್ಥ ಹಾಜಿ ಅರ್ಫಾತ್ ಶೇಖ್ ಮಾತನಾಡಿ, 'ಪವಿತ್ರ ರಮ್ಜಾನ್ ತಿಂಗಳು ಮುಕ್ತಾಯವಾದ ಬಳಿಕ ಮೇ ತಿಂಗಳಿನಲ್ಲಿ ಮಸೀದಿ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು.
ಕ್ರೌಡ್ ಫಂಡ್ ಸಂಗ್ರಹಕ್ಕಾಗಿ ಮುಂದಿನ ವಾರಗಳಲ್ಲಿ ವೆಬ್ಸೈಟ್ ಆರಂಭಿಸಲಾಗುವುದು ಎಂದು ಶೇಖ್ ತಿಳಿಸಿದ್ದಾರೆ.
ಐಐಸಿಎಫ್ ಅಧ್ಯಕ್ಷ ಜುಫರ್ ಅಹ್ಮದ್ ಫಾರೂಕಿ ಮಾತನಾಡಿ, 'ಮಸೀದಿ ನಿರ್ಮಾಣದ ನಿಟ್ಟಿನಲ್ಲಿ ನಾವು ದೇಣಿಗೆ ಸಂಗ್ರಹಕ್ಕೆ ಸಾರ್ವಜನಿಕ ಚಳವಳಿ ನಡೆಸಿಲ್ಲ. ಜೊತೆಗೆ ಈ ಕುರಿತು ಯಾರ ಬಳಿಯೂ ಕೇಳಿಕೊಂಡಿಲ್ಲ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ ಹಿಂದೂ ಸಂಘಟನೆಗಳು ಮೂರು ದಶಕಗಳ ಹಿಂದಿನಿಂದಲೂ ದೇಣಿಗೆ ಸಂಗ್ರಹವನ್ನು ಆರಂಭಿಸಿದ್ದವು. ಈ ಮೂಲಕ ಭಾರತದ 4 ಕೋಟಿ ಜನರಿಂದ ₹3,000 ಕೋಟಿ (₹30 ಬಿಲಿಯನ್) ಸಂಗ್ರಹಿಸಿದೆ' ಎಂದರು.
ಮಸೀದಿ ರಚನೆಯಲ್ಲಿ ಮಿನಾರ್ ಸೇರಿದಂತೆ ಹಲವು ಸಾಂಪ್ರದಾಯಿಕ ಅಂಶಗಳನ್ನು ಸೇರಿಸಬೇಕಿದೆ. ಅಲ್ಲದೆ, ಮಸೀದಿ ಆವರಣದಲ್ಲಿ 500 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನೂ ನಿರ್ಮಿಸಲು ಯೋಜಿಸಲಾಗಿದೆ. ಇದರಿಂದಾಗಿ ಮಸೀದಿ ಯೋಜನೆ ವಿಳಂಬವಾಗಿದೆ ಎಂದು ಐಐಸಿಎಫ್ ಕಾರ್ಯದರ್ಶಿ ಅತಹಾರ್ ಹುಸೇನ್ ಹೇಳಿದ್ದಾರೆ.