ಕವರತ್ತಿ: ಪ್ರವಾಸಿಗರ ಸ್ವರ್ಗ ಲಕ್ಷದ್ವೀಪಕ್ಕೆ ಭೇಟಿ ನೀಡಿ ವಾಪಸ್ಸಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಪ್ರಕೃತಿಯ ಸೌಂದರ್ಯಕ್ಕೆ ಮಾರುಹೋಗಿ, ಪ್ರಕೃತಿಯ ಮಡಿಲಲ್ಲಿ ಕೆಲ ಸಮಯ ಕಳೆದು ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಇತ್ತೀಚೆಗಷ್ಟೇ ಲಕ್ಷದ್ವೀಪದ ಜನರ ಮಧ್ಯೆ ಇರುವ ಅವಕಾಶ ಸಿಕ್ಕಿತು. ಅದರ ದ್ವೀಪಗಳ ಅದ್ಭುತ ಸೌಂದರ್ಯ ಮತ್ತು ಅಲ್ಲಿನ ಜನರ ಆತ್ಮೀಯತೆಗೆ ನಾನಿನ್ನೂ ವಿಸ್ಮಯಗೊಂಡಿದ್ದೇನೆ. ಅಗತ್ತಿ, ಬಂಗಾರಂ ಮತ್ತು ಕವರಟ್ಟಿಯಲ್ಲಿ ಜನರೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿತು. ಅವರ ಆತಿಥ್ಯಕ್ಕಾಗಿ ನಾನು ದ್ವೀಪಗಳ ಜನರಿಗೆ ಧನ್ಯವಾದ ಹೇಳುತ್ತೇನೆ. ಲಕ್ಷದ್ವೀಪದ ವೈಮಾನಿಕ ನೋಟಗಳು ಸೇರಿದಂತೆ ಕೆಲವು ಫೋಟೋಗಳು ಇಲ್ಲಿವೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ ಪ್ರಧಾನಿ ಮೋದಿ ಅವರು 1150 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಿದ್ದಾರೆ. ಪ್ರವಾಸ ಮುಗಿಸಿ ದೆಹಲಿಗೆ ಹಿಂತಿರುಗಿದ ಬಳಿಕ ದ್ವೀಪಸಮೂಹದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲಕ್ಷದ್ವೀಪದ ಪ್ರಶಾಂತತೆಯು 140 ಕೋಟಿ ಭಾರತೀಯರ ಕಲ್ಯಾಣಕ್ಕಾಗಿ ಇನ್ನಷ್ಟು ಶ್ರಮಿಸುವುದು ಹೇಗೆ ಎಂದು ಪ್ರತಿಬಿಂಬಿಸಲು ಅವಕಾಶವನ್ನು ನೀಡಿತು ಎಂದಿದ್ದಾರೆ.
ಪ್ರವಾಸದ ವೇಳೆ ಪ್ರಧಾನಿ ಮೋದಿ ಸಾಕಷ್ಟು ಚಟುವಟಿಕೆಗಳನ್ನು ಸಹ ಮಾಡಿದ್ದಾರೆ. ನನ್ನ ವಾಸ್ತವ್ಯದ ಸಮಯದಲ್ಲಿ, ನಾನು ಸ್ನಾರ್ಕೆಲಿಂಗ್ ಅನ್ನು ಸಹ ಪ್ರಯತ್ನಿಸಿದೆ. ಇದೆಂಥಾ ಉಲ್ಲಾಸದಾಯಕ ಅನುಭವವಾಗಿತ್ತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮ್ಮಲ್ಲಿರುವ ಸಾಹಸ ಪ್ರವೃತ್ತಿಯನ್ನು ಅಪ್ಪಿಕೊಳ್ಳಲು ಬಯಸುವವರಿಗೆ, ಲಕ್ಷದ್ವೀಪವು ಪ್ರಮುಖ ಆದ್ಯತೆಯಾಗಿರಲಿ ಎನ್ನುವ ಮೂಲಕ ಲಕ್ಷದ್ವೀಪದ ಪ್ರವಾಸೋದ್ಯಮವನ್ನು ಉತ್ತೇಜಿಸಿದರು.
ನೀರಿನ ಅಡಿಯಲ್ಲಿ ತೆಗೆದ ಚಿತ್ರಗಳನ್ನು ಸಹ ಪ್ರಧಾನಿ ಮೋದಿ ಅವರು ಹಂಚಿಕೊಂಡಿದ್ದಾರೆ. ಸ್ನಾರ್ಕೆಲಿಂಗ್ ಹೋದಂತ ಸಂರ್ದರ್ಭದಲ್ಲಿ ಸಮುದ್ರದಾಳದ ಬಂಡೆಗಳು ಮತ್ತು ಸಮುದ್ರ ಜೀವಿಗಳನ್ನು ಫೋಟೋಗಳನ್ನು ಕಾಣಬಹುದು. ಲಕ್ಷದ್ವೀಪವು ಕೇವಲ ದ್ವೀಪಗಳ ಸಮೂಹವಲ್ಲ, ಇದು ಸಂಪ್ರದಾಯಗಳ ಪರಂಪರೆ ಮತ್ತು ಅದರ ಜನರ ಆತ್ಮಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಲಕ್ಷದ್ವೀಪದ ಅಭಿವೃದ್ಧಿ ಮೂಲಕ ಜನರ ಜೀವನವನ್ನು ಸುಧಾರಿಸುವುದು, ಉತ್ತಮ ಆರೋಗ್ಯ ಸೇವೆ, ವೇಗದ ಇಂಟರ್ನೆಟ್ ಮತ್ತು ಕುಡಿಯುವ ನೀರಿನ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಸ್ಥಳೀಯ ಸಂಸ್ಕೃತಿಯನ್ನು ರಕ್ಷಿಸುವುದು ಮತ್ತು ಆಚರಿಸುವುದು ಕೇಂದ್ರ ಸರ್ಕಾರದ ಮುಖ್ಯ ಗಮನವಾಗಿದೆ ಮತ್ತು ಲಕ್ಷದ್ವೀಪದಲ್ಲಿ ಈಗ ಉದ್ಘಾಟಿಸಿದ ಯೋಜನೆಗಳು ನಮ್ಮ ಈ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು.