ನವದೆಹಲಿ: ಬಿಹಾರದಲ್ಲಿ ಮೈತ್ರಿಕೂಟ ಸರ್ಕಾರ ಪತನದ ಅಂಚಿನಲ್ಲಿದೆ ಎಂದು ಜೆಡಿಯು ಹಿರಿಯ ನಾಯಕ ಹಾಗೂ ವಕ್ತಾರ ಕೆ.ಸಿ.ತ್ಯಾಗಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕತ್ವವು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪದೇ ಪದೇ ಅವಮಾನಿಸಿದೆ ಎಂದು ಆರೋಪಿಸಿದ್ದಾರೆ.
'ಇಂಡಿಯಾ' ಮೈತ್ರಿಕೂಟವು ಪತನದ ಅಂಚಿನಲ್ಲಿದೆ. ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ 'ಇಂಡಿಯಾ' ಬಣದ ಮಿತ್ರ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿರುವುದು ಇದಕ್ಕೆ ಸಾಕ್ಷಿ ಎಂದು ತ್ಯಾಗಿ ದೂರಿದ್ದಾರೆ.
ಕಾಂಗ್ರೆಸ್ನೊಂದಿಗೆ ಇತರೆ ಪಕ್ಷಗಳನ್ನು ಕರೆತರುವಲ್ಲಿ ನಿತೀಶ್ ಕುಮಾರ್ ಅವರು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೂ ನಮ್ಮ ನಾಯಕನನ್ನು (ನಿತೀಶ್ ಕುಮಾರ್) ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ನಿತೀಶ್ ಅವರು ಇಂಡಿಯಾ ಮೈತ್ರಿಕೂಟದ ಸ್ಥಾನಮಾನಕ್ಕಾಗಿ ಎಂದಿಗೂ ಹಾತೊರೆಯಲಿಲ್ಲ. ಆದರೆ, ಕಾಂಗ್ರೆಸ್ ನಾಯಕತ್ವದ ಕೆಲವರು ನಿತೀಶ್ರನ್ನು ಪದೇ ಪದೇ ಅವಮಾನಿಸಿದ್ದಾರೆ ಆರೋಪಿಸಿದ್ದಾರೆ.
ಬಿಹಾರ ರಾಜಕೀಯ ಬೆಳವಣಿಗೆ: ಕೌತುಕ ಮೂಡಿಸಿದ ನಿತೀಶ್ ನಡೆ
ಬಿಹಾರದ ಮೈತ್ರಿ ರಾಜಕಾರಣವು ಅತ್ಯಂತ ಕುತೂಹಲಕರ ಘಟ್ಟದಲ್ಲಿ ಬಂದು ನಿಂತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಘಟಬಂಧನ್ನಲ್ಲಿಯೇ ಮುಂದುವರಿಯುತ್ತಾರೋ ಅಥವಾ ಅದನ್ನು ತ್ಯಜಿಸಿ, ಬಿಜೆಪಿ ಯೊಂದಿಗೆ ಕೈ ಜೋಡಿಸಿ ಅಧಿಕಾರ ದಲ್ಲಿ ಉಳಿಯುತ್ತಾರೋ ಎಂಬ ಕೌತುಕ ಮುಂದುವರಿದಿದೆ.
ಇದರ ನಡುವೆಯೇ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಲು ನಿತೀಶ್ ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ನಿತೀಶ್ ಅವರನ್ನು ಸಮಾಧಾನ ಪಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಯತ್ನಿಸಿದರು. ಸೋನಿಯಾ ಗಾಂಧಿ ಮತ್ತು ನಿತೀಶ್ ನಡುವೆ ದೂರವಾಣಿ ಮೂಲಕ ಮಾತುಕತೆ ಸಾಧ್ಯವಾಗಿಸಲು ನಡೆಸಿದ ಪ್ರಯತ್ನ ಫಲ ಕೊಡಲಿಲ್ಲ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ನ ಪ್ರಯತ್ನ ವಿಳಂಬವಾಯಿತು ಎಂದು ಜೆಡಿಯು ಮೂಲಗಳು ಪ್ರತಿಕ್ರಿಯಿಸಿವೆ.
ಗಣರಾಜ್ಯೋತ್ಸವ ದಿನದಂದು ಬಿಹಾರದಲ್ಲಿನ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆದುಕೊಂಡಂತೆ ಭಾಸವಾಯಿತು. ನಾನಾ ರೀತಿಯ ಊಹಾಪೋಹ, ವದಂತಿಗಳು ಹರಿದಾಡಿದವು. ಇನ್ನೇನು ನಿತೀಶ್ ಅವರು ಬಿಜೆಪಿಯೊಂದಿಗೆ ಕೈಜೋಡಿಸಲು ಭಾನುವಾರವೇ ದಿನ ನಿಗದಿಯಾಗಿದೆ ಎಂಬ ಮಾತುಗಳೆಲ್ಲ ಕೇಳಿಬಂದವು. ಇದಕ್ಕಾಗಿ ಪಕ್ಷಗಳು ತಮ್ಮ ಶಾಸಕರನ್ನು ಒಂದೆಡೆ ಸೇರಿಸುವ ಕಸರತ್ತನ್ನೂ ಆರಂಭಿಸಿವೆ ಎಂದೂ ತಿಳಿದುಬಂದಿತ್ತು. ಆದರೆ, ಈ ಬೆಳವಣಿಗೆಗಳ ಬಗ್ಗೆ ಪಕ್ಷಗಳಿಂದ ಯಾವುದೇ ಅಧಿಕೃತ ಹೇಳಿಕೆಗಳು ಮಾತ್ರ ಹೊರಬೀಳಲಿಲ್ಲ.