ಲಡಾಖ್: ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನಲ್ಲಿ ರಾಜ್ಯತ್ವ ಮತ್ತು ಸಂವಿಧಾನದ ಆರನೇ ಪರಿಚ್ಛೇದದಡಿಯಲ್ಲಿ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಮೈಕೊರೆಯುವ ಚಳಿಯ ನಡುವೆಯೂ ಸಾವಿರಾರು ಜನರು ಬೀದಿಗಿಳಿದು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.
0
samarasasudhi
ಫೆಬ್ರವರಿ 04, 2024
ಲಡಾಖ್: ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನಲ್ಲಿ ರಾಜ್ಯತ್ವ ಮತ್ತು ಸಂವಿಧಾನದ ಆರನೇ ಪರಿಚ್ಛೇದದಡಿಯಲ್ಲಿ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಮೈಕೊರೆಯುವ ಚಳಿಯ ನಡುವೆಯೂ ಸಾವಿರಾರು ಜನರು ಬೀದಿಗಿಳಿದು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.
ಲಡಾಖ್ಗೆ ರಾಜ್ಯ ಸ್ಥಾನಮಾನ, ಸಂವಿಧಾನದ ಆರನೇ ಪರಿಚ್ಛೇದದಡಿಯಲ್ಲಿ ಸಾಂವಿಧಾನಿಕ ರಕ್ಷಣೆ, ಯುವಕರಿಗೆ ಉದ್ಯೋಗಗಳಲ್ಲಿ ಮೀಸಲಾತಿ ಮತ್ತು ಲೇಹ್-ಕಾರ್ಗಿಲ್ಗೆ ಪ್ರತ್ಯೇಕ ಸಂಸದೀಯ ಕ್ಷೇತ್ರಗಳನ್ನು ರಚಿಸಬೇಕು ಎಂದು ಘೋಷಣೆಗಳನ್ನು ಕೂಗಿ ರ್ಯಾಲಿ ನಡೆಸಿದ್ದಾರೆ.
ಸಾವಿರಾರು ಜನರು ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಾಗುವ ವಿಡಿಯೊವನ್ನು ಎಎನ್ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ.
ಲಡಾಖ್ ಜನರ ಬೇಡಿಕೆ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವಾಲಯವು ಫೆಬ್ರುವರಿ 19 ರಂದು ನವದೆಹಲಿಯಲ್ಲಿ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರ ಅಧ್ಯಕ್ಷತೆಯಲ್ಲಿ ಲಡಾಖ್ ಉನ್ನತ ಅಧಿಕಾರ ಸಮಿತಿಯ (HPC) ಸಭೆ ಕರೆದಿದೆ.
'ಲಡಾಖ್, ಜಮ್ಮು ಮತ್ತು ಕಾಶ್ಮೀರದ ಭಾಗವಾಗಿದ್ದಾಗ ವಿಧಾನಸಭೆಯಲ್ಲಿ 4 ಮತ್ತು ವಿಧಾನ ಪರಿಷತ್ತಿನಲ್ಲಿ 2 ಸದಸ್ಯರನ್ನು ಹೊಂದಿದ್ದೆವು, ಈಗ ನಮಗೆ ವಿಧಾನಸಭೆಯಲ್ಲಿ ಪ್ರಾತಿನಿಧ್ಯವಿಲ್ಲ. ಲಡಾಖ್ ಜನರಿಗೆ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ನೀಡಬೇಕು. ನಾವು ರಾಜ್ಯತ್ವವನ್ನು ಪಡೆಯಬೇಕು. ಅಲ್ಲದೆ ಹೆಚ್ಚು ಬುಡಕಟ್ಟು ಸಮುದಾಯದವರು ವಾಸ ಮಾಡುವ ಪ್ರದೇಶವಾಗಿದೆ. ಮುಖ್ಯವಾಗಿ ಈಶಾನ್ಯ ರಾಜ್ಯಗಳು ಹೊಂದಿರುವ ಎಲ್ಲಾ ವೈಶಿಷ್ಟ್ಯಗಳನ್ನು ಲಡಾಖ್ ಹೊಂದಿದೆ. ಲಡಾಖ್ನಲ್ಲಿ ತಕ್ಷಣವೇ ತನ್ನದೇ ಆದ ಸಾರ್ವಜನಿಕ ಸೇವಾ ಆಯೋಗವನ್ನು ರಚಿಸಬೇಕು' ಎಂದು ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ನ ಕಾನೂನು ಸಲಹೆಗಾರ ಹಾಜಿ ಗುಲಾಮ್ ಮುಸ್ತಫಾ ಒತ್ತಾಯಿಸಿದ್ದಾರೆ.