ಬದಿಯಡ್ಕ: ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘದ 86ನೇ ವಾರ್ಷಿಕೋತ್ಸವ ಶನಿವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬೆಳಗ್ಗೆ 9:30 ಕ್ಕೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಷ್ಣು ಪ್ರಕಾಶ್ ಪೆರ್ವ ದ್ವಜಾರೋಹಣಗೈದು ಚಾಲನೆ ನೀಡಿದರು. ಬಳಿಕ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು. ಅಪರಾಹ್ನ 2:45 ರಿಂದ ಶಾಲಾ ವ್ಯವಸ್ಥಾಪಕ ಕೆ.ಎನ್.ಕೃಷ್ಣ ಭಟ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬದಿಯಡ್ಕ ಪಂಚಾಯತಿ ಸದಸ್ಯೆ ಜಯಶ್ರೀ ಪಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಯಂ ಉಪಸ್ಥಿತರಿದ್ದು ಮಕ್ಕಳ ಬೆಳವಣಿಗೆಯ ಹಂತದಲ್ಲಿ ರಕ್ಷಕರು ಗಮನಿಸಬೇಕಾದ ವಿಚಾರಗಳ ಬಗ್ಗೆ ತಿಳಿಸಿದರು.
ಈ ಸಂದರ್ಭ ಉಪ ಜಿಲ್ಲಾ ಮಟ್ಟದಲ್ಲಿ ಸಾಧನೆಗೈದ ಮಕ್ಕಳನ್ನು ಅಭಿನಂದಿಸಲಾಯಿತು. ಉಪ ಜಿಲ್ಲಾ ವಿದ್ಯಾಧಿಕಾರಿಗಳು ಒಂದನೇ ತರಗತಿಯ ಪುಟಾಣಿಗಳ ಸಂಯುಕ್ತ ದಿನಚರಿಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀವಿದ್ಯಾ ಎ ವಾರ್ಷಿಕ ವರದಿ ವಾಚಿಸಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಮುಖ್ಯೋಪಾದ್ಯಾಯ ಎನ್. ಸುಬ್ರಾಯ ಭಟ್ , ಕ್ಲಸ್ಟರ್ ಸಂಯೋಜಕಿ ಮಮತಾ ಟೀಚರ್, ವ್ಯವಸ್ಥಾಪಕ ಮಂಡಳಿಯ ಸದಸ್ಯ ಶಿವಪ್ರಸಾದ್ ಹೊಸಮನೆ, ನಿವೃತ್ತ ಮುಖ್ಯೋಪಾಧ್ಯಾಯ ಕೆ.ರಾಮಕೃಷ್ಣ ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಷ್ಣು ಪ್ರಕಾಶ್ ಪೆರ್ವ, ಮಾತೃ ಸಂಘದ ಅಧ್ಯಕ್ಷೆ ಮಮತಾ ಮೆಣಸಿನಪಾರೆ ಶುಭ ಹಾರೈಸಿದರು. ಶಿಕ್ಷಕರಾದ ಪ್ರದೀಪ್ ಕುಮಾರ್ ಶೆಟ್ಟಿ, ಸಹನಾ ಯಂ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾದ್ಯಾಯಿನಿ ಶ್ರೀವಿದ್ಯಾ ಎ ಸ್ವಾಗತಿಸಿ, ಅಧ್ಯಾಪಿಕೆ ಮಧುಮತಿ ಕಂಬಾರ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಿತು.
ಹಳೆವಿದ್ಯಾರ್ಥಿಗಳು, ಅಧ್ಯಾಪಕ ಅಧ್ಯಾಪಿಕೆಯರು ರಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸ್ಥಳೀಯ ಯುವ ಕೇಸರಿ ಕ್ಲಬ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಪೂರ್ಣ ಸಹಕಾರ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.