ಮಂಗಳೂರು: ಆಮದು ಮಾಡುವ ಅಡಿಕೆಯ ಕನಿಷ್ಠ ಬೆಲೆ (ಎಂಐಪಿ) ಏರಿಕೆ ಮಾಡಿದ್ದರಿಂದ ಖುಷಿಗೊಂಡಿದ್ದ ಅಡಿಕೆ ಬೆಳೆಗಾರರು ಈಗ ಸ್ಥಳೀಯ ಅಡಿಕೆಯ ದಾರಣೆ ಏರಿಕೆಯಾದ ಕಾರಣ 'ಡಬಲ್' ಸಂಭ್ರಮದಲ್ಲಿದ್ದಾರೆ.
ಮ್ಯಾನ್ಮಾರ್, ಇಂಡೊನೇಷ್ಯಾ ಮತ್ತಿತರ ಕಡೆಗಳಿಂದ ಆಮದಾಗುವ ಅಡಿಕೆಯ ಬೆಲೆ ಹೆಚ್ಚಿಸಿ ಸ್ಥಳೀಯ ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕು ಎಂದು ರಾಜ್ಯದ ಅಡಿಕೆ ಬೆಳೆಗಾರರ ಸಹಕಾರ ಸಂಘಗಗಳ ಪ್ರತಿನಿಧಿಗಳು ನಿರಂತರವಾಗಿ ಆಗ್ರಹಿಸುತ್ತಿದ್ದರು.
ಆದರೆ ಫೆಬ್ರುವರಿ ಅಂತ್ಯ ಮತ್ತು ಮಾರ್ಚ್ ತಿಂಗಳ ಆರಂಭದ ಕೆಲವು ದಿನಗಳ ವರೆಗೆ ರಾಜ್ಯದಲ್ಲಿ ಅಡಿಕೆಯ ದಾರಣೆ ಕಡಿಮೆ ಇತ್ತು. ಈ ವಾರ ಸ್ವಲ್ಪ ಏರಿಕೆ ಕಂಡಿದ್ದು ರೈತರ ಮುಖದಲ್ಲಿ ಹರ್ಷ ಉಕ್ಕಿಸಿದೆ. ಮಾರ್ಚ್ ತಿಂಗಳಲ್ಲಿ ಸಾಮಾನ್ಯವಾಗಿ ಅಡಿಕೆ ಧಾರಣೆ ಕಡಿಮೆಯಾಗುತ್ತದೆ. ಆದರೆ ಇದೇ ಮೊದಲ ಬಾರಿ ಈ ತಿಂಗಳಲ್ಲಿ ಉತ್ತಮ ಬೆಲೆ ಬಂದಿದೆ ಎಂದು ರೈತರು ಹೇಳುತ್ತಿದ್ದಾರೆ.
ಫೆಬ್ರುವರಿಗೂ ಮೊದಲು ಅಡಿಕೆ ಕೆಜಿಗೆ ₹ 420ರ ಆಸುಪಾಸಿನಲ್ಲಿತ್ತು. ನಂತರ ದಿಢೀರ್ ಕುಸಿತ ಕಂಡಿತ್ತು. ಈಗ ಮತ್ತೆ ಏರುಗತಿಯಲ್ಲಿ ಸಾಗಿ ₹ 340ಕ್ಕೂ ಹೆಚ್ಚು ಆಗಿದೆ.
'ಅಡಿಕೆಯನ್ನು ಅಕ್ರಮವಾಗಿ ಆಮದು ಮಾಡಲಾಗುತ್ತದೆ. ಮ್ಯಾನ್ಮಾರ್ನಿಂದ ಹೆಚ್ಚು ಅಡಿಕೆಯನ್ನು ತರುವುದರಿಂದ ಸ್ಥಳೀಯ ರೈತರಿಗೆ ಹೆಚ್ಚು ತೊಂದರೆಯಾಗುತ್ತದೆ' ಎಂದು ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಎಚ್. ಕೃಷ್ಣಕುಮಾರ್ ಹೇಳಿದರು.
ಅಡಿಕೆ ಆಮದು ಮಾಡುವುದರಿಂದ ಭಾರತದ ಅಡಿಕೆ ಗೌಣವಾಗುತ್ತಿದೆ. ಪ್ರತಿ ತಿಂಗಳು 200 ಟನ್ಗಳಿಗೂ ಹೆಚ್ಚು ಅಡಿಕೆ ಸಂಗ್ರಹದ ಗುರಿ ಹೊಂದಿರುವ ಬೃಹತ್ ಕಂಪನಿಗಳು ಮ್ಯಾನ್ಮಾರ್ನಂಥ ದೇಶದ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿವೆ ಎಂಬುದು ಸ್ಥಳೀಯ ಬೆಳೆಗಾರರನ್ನು ಗಂಭೀರ ಯೋಚನೆಗೆ ಈಡುಮಾಡಿದೆ' ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಹೇಳಿದರು.