ಮುಳ್ಳೇರಿಯ: ಸಾಮಾಜಿಕ ನ್ಯಾಯ ಇಲಾಖೆಯು ಎಂಡೋಸಲ್ಫಾನ್ ಸಂತ್ರಸ್ತರಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಪುನರ್ವಸತಿ ಗ್ರಾಮದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಳುತ್ತಿರುವುದು ಸರ್ಕಾರಕ್ಕೆ ಹಾಗೂ ಇಲಾಖೆಗೆ ಹೆಮ್ಮೆಯ ಕ್ಷಣವೆಂದು ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಇಲಾಖೆ ಸಚಿವೆ ಡಾ.ಆರ್.ಬಿಂದು ಹೇಳಿದರು.
ಮುಳಿಯಾರ್ ಮುದಲಪಾರದಲ್ಲಿ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮ ‘ಸಹಜೀವನಂ ಸ್ನೇಹ ಗ್ರಾಮ’ದ ಮೊದಲ ಹಂತದ ಉದ್ಘಾಟನೆಯನ್ನು ಇತ್ತೀಚೆಗೆ ನಿರ್ವಹಿಸಿ ಸಚಿವರು ಮಾತನಾಡಿದರು.
ಮುಖ್ಯಮಂತ್ರಿಗಳ ವಿಕಲಚೇತನರೊಂದಿಗೆ ನಡೆಸಿದ ಮುಖಾಮುಖಿ ಕಾರ್ಯಕ್ರಮದಲ್ಲಿ ಕುಟುಂಬಶ್ರೀ ಮಾದರಿಯಲ್ಲಿ ವಿಕಲಚೇತನರ ಸ್ವಾಶ್ರಯ ಸಂಘಗಳನ್ನು ರೂಪಿಸುವ ಯೋಜನೆಯನ್ನು ಮಂಡಿಸಲಾಯಿತು. ಆ ಯೋಜನೆಯ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲೆಯಲ್ಲಿ ನಡೆಸಬೇಕೆಂದು ವಿಕಲಚೇತನರ ಸಬಲೀಕರಣದ ಆರಂಭ ಕಾಸರಗೋಡಿನಿಂದಲೇ ಆಗಬೇಕೆಂದು ಸಚಿವರು ಹೇಳಿದರು.
ಎಂಡೋಸಲ್ಫಾನ್ ಪ್ರದೇಶದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಂತೆ ಸಂತ್ರಸ್ತರಿಗೆ ಐದು ಲಕ್ಷ ರೂಪಾಯಿ ನೀಡಿದಂತೆ 456,19,38,884 ರೂಪಾಯಿಯ ಯೋಜನೆಗಳನ್ನು ನಡೆಸಲಾಗಿದೆ. ಪುನರ್ವಸತಿ ಕೇಂದ್ರದ ಮೊದಲ ಹಂತದಲ್ಲಿ ಕನ್ಸಲ್ಟಿಂಗ್ ಆಂಡ್ ಹೈಡ್ರೊ ಥೆರಪಿ ಬ್ಲಾಕ್, ಕ್ಲಿನಿಕಲ್ ಸೈಕಾಲಜಿ ಬ್ಲಾಕ್ ಎಂಬಿವುಗಳನ್ನು ಸಿದ್ಧಪಡಿಸಲಾಗಿದೆ. ಎಂಡೋಸಲ್ಫಾನ್ ಲಿಸ್ಟಿನಲ್ಲಿ ಹೆಸರು ಸೇರಿಸಲು ವೈದ್ಯಕೀಯ ಶಿಬಿರ ನಡೆಸುವ ಕಾರ್ಯಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ಮುಖ್ಯಮಂತ್ರಿ ನೇತೃತ್ವದಲ್ಲಿ ನಿರಂತರ ಚರ್ಚೆ ನಡೆಸಿ ಚಟುವಟಿಕೆಗಳ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಮುಂದಿನ ಹಂತದ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು. ಜಿಲ್ಲಾ ಪಂಚಾಯತ್ನ ಸಹಯೋಗದೊಂದಿಗೆ ಅಂಗವಿಕಲ ಮಕ್ಕಳಿಗೆ ಇಂದ್ರಿಯಗಳ ಲೋಕವನ್ನು ಅನುಭವಿಸಲು ಆಟಿಕೆಗಳೊಂದಿಗೆ ಸೆನ್ಸರಿ ಪಾರ್ಕ್ ಸ್ಥಾಪಿಸಲಾಗುವುದು. ಬಿಸಿಲಿನ ಪ್ರದೇಶದಲ್ಲಿ ಅಗತ್ಯ ನೆರಳಿನ ಮರಗಳನ್ನು ಒದಗಿಸುವುದಾಗಿ ಜಿಲ್ಲಾ ಪಂಚಾಯಿತಿ ವತಿಯಿಂದಲೂ ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಸರ್ಕಾರವು ಕಾಸರಗೋಡು ಜಿಲ್ಲೆಯಲ್ಲಿ 2 ನ್ಯೂರಾಲಜಿಸ್ಟ್ ಹುದ್ದೆಗಳು, ತಪಾಸಣಾ ಸೌಲಭ್ಯಗಳು, ಕ್ಯಾಥ್ ಲ್ಯಾಬ್ ಸೌಲಭ್ಯ ಹಾಗೂ ತಾಯಿ ಮತ್ತು ಮಗುವಿನ ಆಸ್ಪತ್ರೆಯನ್ನು ನೀಡಿದೆ. ಕಾಸರಗೋಡು ವೈದ್ಯಕೀಯ ಕಾಲೇಜಿಗೆ ಕಿಫ್ಬಿ ಯೋಜನೆಯಡಿ 150 ಕೋಟಿ ಮಂಜೂರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ನ್ಯಾಯವಾದಿ.ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ನ್ಯಾಯ ಇಲಾಖೆ ನಿರ್ದೇಶಕ ಎಚ್.ದಿನೇಶನ್ ಯೋಜನೆ ವಿವರಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕ ಇ.ಚಂದ್ರಶೇಖರನ್, ಎಡಿಎಂ ಕೆ.ವಿ.ಶ್ರುತಿ, ಪ್ಲಾನಿಂಗ್ ಆಂಡ್ ಎಕಾನಾಮಿಕ್ ಅಫೇರ್ಸ್ ಸ್ಪೆಷಲ್ ಸೆಕ್ರೆಟರಿ ಶೈನಿ ಜಾರ್ಜ್ ಮುಖ್ಯಅತಿಥಿಗಳಾಗಿದ್ದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಮುಳಿಯಾರ್ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ, ಬಿ.ಕೆ.ನಾರಾಯಣನ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಮನು, ಎಸ್.ಎನ್.ಸರಿತಾ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಬಿ.ಶೆಫೀಕ್, ಬ್ಲಾಕ್ ಪಂಚಾಯಿತಿ ಸದಸ್ಯ ಎಂ.ಕುಂಞಂಬು ನಂಬಿಯಾರ್, ಮುಳಿಯಾರ್ ಪಂಚಾಯಿತಿ ಉಪಾಧ್ಯಕ್ಷ ಎ.ಜನಾರ್ದನನ್, ಮುಳಿಯಾರ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಇ.ಮೋಹನನ್, ವಾರ್ಡ್ ಸದಸ್ಯ ರಮೇಶನ್ ಮುದಲಪಾರ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ವಿ.ಚಂದ್ರನ್, ಎಂಡೋಸಲ್ಫಾನ್ ಸೆಲ್ ಡೆಪ್ಯೂಟಿ ಕಲೆಕ್ಟರ್ ಪಿ.ಸುರ್ಜಿತ್, ಕಾಞಂಗಾಡ್ ನಗರಸಭೆ ವಾರ್ಡ್ ಕೌನ್ಸಿಲರ್ ವಿ.ವಿ.ರಮೇಶನ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಎಂ.ಮಾಧವನ್, ಎಂ.ಸಿ.ಪ್ರಭಾಕರನ್, ಕೆ.ಬಿ.ಮುಹಮ್ಮದ್ ಕುಂಞÂ, ಅಬ್ದುಲ್ ರೌಫ್, ಜಯಕೃಷ್ಣನ್ ಮಾಸ್ತರ್, ಅಬ್ದುಲ್ ಖಾದರ್ ಕೇಳೋಟ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಸ್ವಾಗತಿಸಿ, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್ ವಂದಿಸಿದರು.