ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ನಿಯಮಗಳ ಅನುಷ್ಠಾನಕ್ಕೆ ತಡೆ ನೀಡುವಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಪೌರತ್ವ ತಿದ್ದುಪಡಿ ನಿಯಮಗಳು ಅನಿಯಂತ್ರಿತವಾಗಿದೆ ಮತ್ತು ಧಾರ್ಮಿಕ ಗುರುತಿನ ಆಧಾರದ ಮೇಲೆ ಕೆಲವು ವ್ಯಕ್ತಿಗಳ ಪರವಾಗಿ ಅನ್ಯಾಯದ ಪ್ರಯೋಜನವನ್ನು ಸೃಷ್ಟಿಸುತ್ತದೆ. ಇದು ಸಂವಿಧಾನದ 14 ಮತ್ತು 15ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಮುಸ್ಲಿಂ ಲೀಗ್ ತನ್ನ ಅರ್ಜಿಯಲ್ಲಿ ಹೇಳಿದೆ.
ಸಿಎಎಯ ನಿಬಂಧನೆಗಳನ್ನು ಪ್ರಶ್ನಿಸಿ ಸುಮಾರು 250 ಅರ್ಜಿಗಳು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿವೆ. ಸಿಎಎ ಸಂವಿಧಾನಿಕ ಎಂದು ಪರಿಗಣಿಸಿದರೆ, ಅಸಾಮಾನ್ಯ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದು ಅನುಷ್ಠಾನವಾದರೆ ಸಿಎಎ ನಿಯಮಗಳ ಅಡಿಯಲ್ಲಿ ಪೌರತ್ವವನ್ನು ಪಡೆಯುವವರ ಪೌರತ್ವವನ್ನು ತೆಗೆದುಹಾಕಬೇಕಾಗುತ್ತದೆ ಎಂದು ಹೇಳಲಾಗಿದೆ. "ಆದ್ದರಿಂದ ಸಿಎಎ ಮತ್ತು ಅನ್ವಯವಾಗುವ ನಿಯಮಗಳ ಅನುಷ್ಠಾನವನ್ನು ನ್ಯಾಯಾಲಯವು ನಿರ್ಧರಿಸುವವರೆಗೆ ಮುಂದೂಡುವುದು ಪ್ರತಿಯೊಬ್ಬರ ಹಿತದೃಷ್ಟಿಯಿಂದ ಒಳ್ಳೆಯದ್ದು ಎಂದು ಐಯುಎಂಎಲ್ ಹೇಳಿದೆ.
2014ರ ಡಿಸೆಂಬರ್ 31ಕ್ಕೂ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ಮುಸ್ಲಿಮೇತರ ವಲಸಿಗರಿಗೆ, ಅಂದರೆ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲು CAA ದಾರಿ ಮಾಡಿಕೊಡುತ್ತದೆ. ಈ ಕಾನೂನು ಪುನರ್ವಸತಿಗೆ ಕಾನೂನು ಅಡೆತಡೆಗಳನ್ನು ತೆಗೆದುಹಾಕುತ್ತದೆ. ಪೌರತ್ವವನ್ನು ಒದಗಿಸುವ ಮೂಲಕ ದಶಕಗಳಿಂದ ಬಳಲುತ್ತಿರುವ ನಿರಾಶ್ರಿತರಿಗೆ ಗೌರವಯುತ ಜೀವನವನ್ನು ಖಚಿತಪಡಿಸುತ್ತದೆ. ಈ ಕಾನೂನು ವರ್ಷಗಳಿಂದ ಶೋಷಣೆಗೆ ಒಳಗಾದವರಿಗೆ ಮತ್ತು ಭಾರತವನ್ನು ಹೊರತುಪಡಿಸಿ ಜಗತ್ತಿನಲ್ಲಿ ಬೇರೆ ಆಶ್ರಯವಿಲ್ಲದವರಿಗೆ ಪ್ರಯೋಜನವಾಗಲಿದೆ.
CAA ಅಡಿಯಲ್ಲಿ ಭಾರತೀಯ ಪೌರತ್ವವನ್ನು ಹೇಗೆ ಪಡೆಯುವುದು?
ಸಿಎಎ ಅಡಿಯಲ್ಲಿ, ಭಾರತೀಯ ಪೌರತ್ವವನ್ನು ಬಯಸುವ ಜನರು ಅರ್ಜಿ ಸಲ್ಲಿಸುವ ದಿನಾಂಕಕ್ಕಿಂತ ಕನಿಷ್ಠ 12 ತಿಂಗಳ ಮೊದಲು ದೇಶದಲ್ಲಿ ನೆಲೆಸಿರಬೇಕು. ಭಾರತೀಯ ಪೌರತ್ವವನ್ನು ಪಡೆಯಲು ಅರ್ಹರೆಂದು ಪರಿಗಣಿಸಲು ಈ 12 ತಿಂಗಳ ಹಿಂದಿನ 8 ವರ್ಷಗಳಲ್ಲಿ ಅರ್ಜಿದಾರರು ಕನಿಷ್ಠ 6 ವರ್ಷಗಳನ್ನು ದೇಶದಲ್ಲಿ ಕಳೆದಿರಬೇಕು ಎಂದು ನಿಯಮಗಳು ಹೇಳುತ್ತವೆ.