ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ, ಚುನಾವಣಾ ಆಯೋಗಕ್ಕೆ ಸೋಮವಾರ ದೂರು ನೀಡಿದೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ದೂರು ದಾಖಲಿಸಿದ ನಂತರ ಮಾತನಾಡಿದ ಪುರಿ, 'ಕಾಂಗ್ರೆಸ್ ನಾಯಕನ ಹೇಳಿಕೆ 'ಅತ್ಯಂತ ಆಕ್ಷೇಪಾರ್ಹ'ವಾಗಿದ್ದು, ಅದು ಕೇವಲ ನೀತಿಸಂಹಿತೆಯ ಉಲ್ಲಂಘನೆ ಅಷ್ಟೇ ಅಲ್ಲದೇ ಗಂಭೀರ ಪರಿಣಾಮ ಬೀರುವಂಥದ್ದು ಕೂಡ ಆಗಿದೆ' ಎಂದು ಹೇಳಿದರು.
'ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ, ಇದು (ಲೋಕಸಭಾ ಚುನಾವಣೆ) 'ಫಿಕ್ಸ್ ಆದ ಮ್ಯಾಚ್' ಎಂದು ಹೇಳಿದ್ದಾರೆ. ಜತೆಗೆ ಕೇಂದ್ರ ಸರ್ಕಾರವು ತನ್ನ ವ್ಯಕ್ತಿಗಳನ್ನು ಚುನಾವಣಾ ಆಯೋಗಕ್ಕೆ ನಿಯೋಜಿಸಿದೆ ಎಂದಿದ್ದಾರೆ. ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿರುವ ಅವರು, ಚುನಾವಣೆಯ ನಂತರ ಸಂವಿಧಾನವನ್ನು ರದ್ದುಪಡಿಸಲಾಗುತ್ತದೆ (ಬದಲಿಸಲಾಗುತ್ತದೆ) ಎಂದಿದ್ದಾರೆ' ಎನ್ನುವುದಾಗಿ ಪುರಿ ತಿಳಿಸಿದರು.
'ರಾಹುಲ್ ಮತ್ತು ಇತರ ಕಾಂಗ್ರೆಸ್ ಮುಖಂಡರು ಹಾಗೂ 'ಇಂಡಿಯಾ' ಕೂಟದ ನಾಯಕರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನಾವು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದೇವೆ' ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡರ ದಾರಿ ತಪ್ಪಿಸುವ ಹೇಳಿಕೆಗಳನ್ನು ಗಮನಿಸುವಂತೆ ಚುನಾವಣಾ ಆಯೋಗವನ್ನು ಕೋರಿರುವ ಬಿಜೆಪಿಯು, 'ಈ ಮೂಲಕ ಅವರು ಜನರಲ್ಲಿ ಅಸಮಾಧಾನ ಉಂಟುಮಾಡುತ್ತಿರುವುದರ ಜತೆಗೆ ಚುನಾವಣಾ ನೀತಿಸಂಹಿತೆ ಹಾಗೂ ಆರೋಗ್ಯಕರ ಪ್ರಜಾತಾಂತ್ರಿಕ ವಿಧಾನಗಳನ್ನು ಉಲ್ಲಂಘಿಸುತ್ತಿದ್ದಾರೆ' ಎಂದು ದೂರಿನಲ್ಲಿ ತಿಳಿಸಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, 'ರಾಹುಲ್ ಗಾಂಧಿ ಪದೇ ಪದೇ ಇಂಥ ಹೇಳಿಕೆ ನೀಡುತ್ತಿದ್ದಾರೆ' ಎಂದು ಆರೋಪಿಸಿದರು. 'ಲೋಕಸಭಾ ಚುನಾವಣೆಯಲ್ಲಿ ಇಂಥ ಹೇಳಿಕೆ ನೀಡದಂತೆ ಕಾಂಗ್ರೆಸ್ ನಾಯಕನ ಮಾತುಗಳನ್ನು ಸಂಪೂರ್ಣವಾಗಿ ಸೆನ್ಸಾರ್ ಮಾಡಬೇಕು' ಎಂದು ಅವರು ಆಯೋಗವನ್ನು ಒತ್ತಾಯಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಯೋಗವು ತಿಳಿಸಿದೆ ಎಂದು ಅವರು ಹೇಳಿದರು.