ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ನ 'ಘರ್ ಘರ್ ಗ್ಯಾರಂಟಿ' ಅಭಿಯಾನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು (ಬುಧವಾರ) ಚಾಲನೆ ನೀಡಿದರು.
ಈ ಅಭಿಯಾನದ ಅಡಿಯಲ್ಲಿ ದೇಶದಾದ್ಯಂತ ಎಂಟು ಕೋಟಿ ಮನೆಗಳಿಗೆ ತಲುಪಿ ಗ್ಯಾರಂಟಿ ಬಗ್ಗೆ ಅರಿವು ಮೂಡಿಸುವ ಗುರಿ ಹೊಂದಲಾಗಿದೆ.
ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಕೈಥವಾಡದ ಉಸ್ಮಾನ್ಪುರದಿಂದ ಈ ಅಭಿಯಾನವನ್ನು ಮಲ್ಲಿಕಾರ್ಜುನ ಖರ್ಗೆ ಪ್ರಾರಂಭಿಸಿದರು.
'ನಮ್ಮ 'ಪಂಚ ನ್ಯಾಯ ಪಚ್ಚೀಸ್ ಗ್ಯಾರಂಟಿ' ಅನ್ನು ಜನರಿಗೆ ತಲುಪಿಸಲು ಈ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದ್ದೇವೆ. ದೇಶದಾದ್ಯಂತ ಎಂಟು ಕೋಟಿ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸುವ ಯೋಜನೆ ಹೊಂದಿದ್ದೇವೆ. ನಾವು ನೀಡಿದ ಭರವಸೆಗಳನ್ನೆಲ್ಲ ಈಡೇರಿಸಲಿದ್ದೇವೆ ಎಂದು ಜನರಿಗೆ ತಿಳಿಸಲಿದ್ದೇವೆ' ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಕಾಂಗ್ರೆಸ್ನ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ಈ ಕಾರ್ಡ್ ಅನ್ನು ಮನೆ ಮನೆಗಳಿಗೆ ತೆರಳಿ ವಿತರಣೆ ಮಾಡಲಿದ್ದಾರೆ. ಮೈತ್ರಿ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಜಾರಿ ಮಾಡಲಿರುವ ಯೋಜನೆಗಳ ಬಗ್ಗೆ ಮನವರಿಕೆ ಮಾಡಲಿದ್ದಾರೆ ಎಂದು ಅವರು ಹೇಳಿದರು.
'ನಮ್ಮ ಸರ್ಕಾರ ಸದಾ ಜನಪರ ಕೆಲಸ ಮಾಡಲಿದೆ ಎಂದು ಭರವಸೆ ನೀಡುತ್ತೇವೆ. ಪ್ರಧಾನಿ 'ಮೋದಿ ಕಿ ಗ್ಯಾರಂಟಿ' ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಗ್ಯಾರಂಟಿಗಳು ಎಂದಿಗೂ ಜನರನ್ನು ತಲುಪುವುದಿಲ್ಲ. ಪ್ರಧಾನಿ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಜನರಿಗೆ ಅದು ಸಿಕ್ಕಿಲ್ಲ' ಎಂದು ಅವರು ಆರೋಪಿಸಿದರು.