ಕಾಸರಗೋಡು: ಸಿವಿಲ್ ಸ್ಟೇಷನ್ ನೌಕರರಿಗೆ ಮಂಜೂರಾಗಿರುವ ಶೇ.8ರಷ್ಟು ಮನೆ ಬಾಡಿಗೆ ಭತ್ತೆಯನ್ನು ಜಿಲ್ಲಾ ಕೇಂದ್ರ ಒಳಗೊಂಡ ಕಾಸರಗೋಡು ನಗರಸಭಾ ವ್ಯಾಪ್ತಿಯ ಎಲ್ಲಾ ನೌಕರರಿಗೆ ಮಂಜೂರುಗೊಳಿಸುವಂತೆ ಕೇರಳ ಎನ್.ಜಿ.ಓ ಸಂಘ ಕಾಸರಗೋಡು ಜಿಲ್ಲಾ ಸಮಿತಿ ಸರ್ಕಾರವನ್ನು Áಗ್ರಹಿಸಿದೆ.
ಕೇರಳದ ಇತರ ಜಿಲ್ಲೆಗಳಲ್ಲಿ ಭತ್ತೆ ಮಂಜೂರುಗೊಳಿಸಿದ್ದರೆ, ಕಾಸರಗೋಡು ಸಿವಿಲ್ ಸ್ಟೇಷನ್ನ ನೌಕರರಿಗೆ ಎಚ್ಆರ್ಎ ಮಂಜೂರುಗೊಳಿಸದೆ ತಾರತಮ್ಯ ನೀತಿ ಅನುಸರಿಸುತ್ತಿರುವುದನ್ನು ನಿಲ್ಲಿಸಬೇಕು. ಕಾಸರಗೋಡು ನಗರಸಭಾ ವ್ಯಾಪ್ತಿಯ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಲು ಪ್ರಬಲ ಕಾನೂನು ಹೋರಾಟವನ್ನು ಮುಂದುವರಿಸಲು ಸಭೆ ನಿರ್ಧರಿಸಿತು.
ಸಂಘಟನೆ ರಾಜ್ಯ ಕಾರ್ಯದರ್ಶಿ ವಿಜಯನ್ ಸಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ರಂಜಿತ್ ಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ಪಿ.ಪೀತಾಂಬರನ್, ಸಂತೋಷನ್ ವಿ.ಕೆ, ಆಂಜನೇಯನ್, ರವೀಂದ್ರನ್ ಕೋಟೋಡಿ, ತುಳಸೀಧರನ್. ಟಿ, ಸುರೇಶ್ ನಾಯ್ಕ್, ದೇವದಾಸ್ ಮೊದಲಾದವರು ಉಪಸ್ಥಿತರಿದ್ದರು. ಶ್ಯಾಮ್ ಪ್ರಸಾದ್ ಸ್ವಾಗತಿಸಿದರು. ರವಿಕುಮಾರ್ ವಂದಿಸಿದರು.