ಜೈಪುರ: ಮೊಬೈಲ್ ಗೀಳಿಗೆ ತುತ್ತಾಗಿದ್ದ ಮಗಳ ವರ್ತನೆಯಿಂದ ಕೆಂಡಾಮಂಡಲರಾದ ತಾಯಿ, ರಾಡ್ನಿಂದ ಹೊಡೆದು ಮಗಳನ್ನು ಕೊಂದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಮಂಗಳವಾರ ನಡೆದಿದೆ.
'ಜೈಪುರದ ಬಿಂದಯಾಕ್ ಬಡಾವಣೆಯ ನಿಖಿತಾ ಸಿಂಗ್ (22) ಮೃತ ಯುವತಿ. ಅತಿಯಾದ ಮೊಬೈಲ್ ಬಳಕೆ ಕುರಿತು ತಾಯಿ ಸೀತಾ ಸಿಂಗ್ ಹಾಗೂ ಮಗಳು ನಿಖಿತಾ ನಡುವೆ ವಾಗ್ವಾದ ನಡೆದಿತ್ತು.
ಸ್ಪರ್ಧಾತ್ಮಕ ಪರೀಕ್ಷೆಗೆ ನಿಖಿತಾ ತಯಾರಿ ನಡೆಸಿದ್ದರು. ಅವರ ತಂದೆ ಬ್ರಿಜೇಶ್ ಅವರು ಮಗಳ ಮೊಬೈಲ್ ಗೀಳು ಕುರಿತು ಹಲವು ಬಾರಿ ತಿಳಿ ಹೇಳಿದ್ದರು. ಎರಡು ತಿಂಗಳ ಹಿಂದೆಯೂ ಪಾಲಕರೊಂದಿಗೆ ನಿಖಿತಾ ಇದೇ ವಿಷಯವಾಗಿ ವಾಗ್ವಾದ ನಡೆಸಿದ್ದರು. ಆಗ, ಮೊಬೈಲ್ ಬಳಕೆಗೆ ಕಡಿವಾಣ ಹಾಕುವುದಾಗಿ ನಿಖಿತಾ ಪಾಲಕರಿಗೆ ವಾಗ್ದಾನ ಮಾಡಿದ್ದಳು.
ಆದರೆ ಸೋಮವಾರ ಬೆಳಿಗ್ಗೆ ಬ್ರಿಜೇಶ್ ಕೆಲಸಕ್ಕೆ ಹೊರಡುವ ಮೊದಲು ಮಗಳ ಕೈಯಲ್ಲಿ ಫೋನ್ ಕಂಡು ಸಿಟ್ಟಾದರು. ಅದನ್ನು ಕಸಿದು ಸೀತಾ ಕೈಯಲ್ಲಿ ಕೊಟ್ಟು, ಬಚ್ಚಿಡುವಂತೆ ಹೇಳಿ ಅವರು ಕೆಲಸಕ್ಕೆ ಹೋದರು.
ತಂದೆ ಕೆಲಸಕ್ಕೆ ತೆರಳಿದ ನಂತರ ತಾಯಿ ಹಾಗೂ ಮಗಳ ನಡುವೆ ಇದೇ ವಿಷಯವಾಗಿ ವಾಗ್ವಾದ ನಡೆದಿದೆ. ಮಗಳ ಮಾತಿಗೆ ಸೀತಾ ಸಿಟ್ಟಿಗೆದ್ದಿದ್ದಾರೆ. ಮನೆಯಲ್ಲಿದ್ದ ರಾಡ್ನಿಂದ ನಿಖಿತಾ ತಲೆಗೆ ಹೊಡೆದಿದ್ದಾರೆ. ಆಘಾತದಿಂದ ಪ್ರಜ್ಞೆ ತಪ್ಪಿ ಬಿದ್ದ ನಿಖಿತಾರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.
'ಸೀತಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ' ಎಂದು ಠಾಣಾಧಿಕಾರಿ ಭಜನ್ಲಾಲ್ ತಿಳಿಸಿದ್ದಾರೆ.


