ಕಾಸರಗೋಡು: ಹಿಮಾಚಲ ಪ್ರದೇಶದ ಮನಾಲಿಗೆ ಟ್ರಕ್ಕಿಂಗ್ ತೆರಳಿದ್ದ ಯುವಕ, ಉಸಿರಾಟದ ಸಮಸ್ಯೆಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಚೀಮೇನಿ ನಿವಾಸಿ, ಉದ್ಯಮಿ ಕೆ.ಪಿ ದಾಮೋದರನ್-ಪದ್ಮಿನಿ ದಂಪತಿ ಪುತ್ರ ದಿನೂಪ್(32)ಮೃತಪಟ್ಟ ಯುವಕ. ಬೆಂಗಳೂರಿನ ಐಟಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ದಿನೂಪ್, ಅಲ್ಲಿಂದ ಸ್ನೇಹಿತರೊಂದಿಗೆ ಮನಾಲಿ ತೆರಳಿದ್ದು, ಮೂರು ದಿವಸಗಳ ಕಾಲ ಟ್ರಕ್ಕಿಂಗ್ ನಡೆಸಿದ್ದರು. ನಂತರ ಅವರಿಗೆ ಜ್ವರ ಹಾಗೂ ಉಸಿರಾಟದ ಸಮಸ್ಯೆ ಎದುರಾಗಿತ್ತು. ತಕ್ಷಣ ಜತೆಗಿದ್ದವರು, ಇವರನ್ನು ಸನಿಹದ ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಗಿರಲಿಲ್ಲ. ಮೃತದೇಹ ಊರಿಗೆ ಕರೆತರುವ ಪ್ರಯತ್ನ ನಡೆಯುತ್ತಿದೆ.