ನವದೆಹಲಿ: ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಕುರಿತು ರಾಜ್ಯ ಸರ್ಕಾರಗಳು ಅತ್ಯಂತ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.
0
samarasasudhi
ಆಗಸ್ಟ್ 16, 2024
ನವದೆಹಲಿ: ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಕುರಿತು ರಾಜ್ಯ ಸರ್ಕಾರಗಳು ಅತ್ಯಂತ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.
ಸ್ವಾತಂತ್ರ್ಯೋತ್ಸವ ಅಂಗವಾಗಿ ಕೆಂಪುಕೋಟೆಯಿಂದ ಭಾಷಣ ಮಾಡಿದ ಅವರು, ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.
ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಅವರ ವಿರುದ್ಧ ಹಿಂಸಾಚಾರದ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, 'ಈ ವಿಚಾರವಾಗಿ ಜನರಿಂದ ವ್ಯಕ್ತವಾಗುತ್ತಿರುವ ಆಕ್ರೋಶ ನನಗೆ ಅರ್ಥವಾಗುತ್ತದೆ' ಎಂದರು.
'ಮಹಿಳೆಯರ ಮೇಲಿನ ಅಪರಾಧಗಳ ಕುರಿತು ತ್ವರಿತವಾಗಿ ತನಿಖೆ ನಡೆಸಬೇಕು. ಇಂತಹ ಪೈಶಾಚಿಕ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದ ಅವರು, 'ಇಂತಹ ಕೃತ್ಯಗಳ ಬಗ್ಗೆ ಸಮಾಜವು ಸಹ ಆತ್ಮಾವಲೋಕನ ನಡೆಸಬೇಕು' ಎಂದರು.
'ಅಪರಾಧಿಗಳಲ್ಲಿ ಅವರು ಎದುರಿಸಬೇಕಾದ ಶಿಕ್ಷೆ ಬಗ್ಗೆ ಭಯ ಉಂಟಾಗುವಂತೆ ಮಾಡಬೇಕು. ಇಂತಹ ಪಾಪದ ಕೆಲಸಗಳನ್ನು ಮಾಡಿದರೆ, ನಮ್ಮನ್ನು ಗಲ್ಲಿಗೇರಿಸಲಾಗುತ್ತದೆ ಎಂಬ ಅರಿವು ಅಪರಾಧ ಎಸಗುವವರಲ್ಲಿರಬೇಕು ' ಎಂದು ಹೇಳಿದರು. ನೂತನ ಅಪರಾಧಿಕ ಕಾಯ್ದೆಗಳಲ್ಲಿ, ಶಿಕ್ಷೆ ವಿಧಿಸುವುದಕ್ಕಿಂತಲೂ ನ್ಯಾಯ ಒದಗಿಸುಲು ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.