ಲಖನೌ: ಎಂಬತ್ತು ವರ್ಷ ವಯಸ್ಸಾಗಿರುವ ದಂಪತಿಯೊಬ್ಬರ ನಡುವೆ ಜೀವನಾಂಶದ ಮೊತ್ತಕ್ಕೆ ಸಂಬಂಧಿಸಿದಂತೆ ನಡೆದಿರುವ ತಕರಾರನ್ನು ಗಮನಿಸಿದ ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಸೌರವ್ ಶ್ಯಾಮ್ ಶಂಶೇರಿ ಅವರು 'ಕಲಿಯುಗ ಶುರುವಾಗಿರುವಂತೆ ಕಾಣುತ್ತಿದೆ' ಎಂದರು.
0
samarasasudhi
ಸೆಪ್ಟೆಂಬರ್ 26, 2024
ಲಖನೌ: ಎಂಬತ್ತು ವರ್ಷ ವಯಸ್ಸಾಗಿರುವ ದಂಪತಿಯೊಬ್ಬರ ನಡುವೆ ಜೀವನಾಂಶದ ಮೊತ್ತಕ್ಕೆ ಸಂಬಂಧಿಸಿದಂತೆ ನಡೆದಿರುವ ತಕರಾರನ್ನು ಗಮನಿಸಿದ ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಸೌರವ್ ಶ್ಯಾಮ್ ಶಂಶೇರಿ ಅವರು 'ಕಲಿಯುಗ ಶುರುವಾಗಿರುವಂತೆ ಕಾಣುತ್ತಿದೆ' ಎಂದರು.
ಪತ್ನಿ ಗಾಯತ್ರಿ ದೇವಿ ಅವರಿಗೆ ಜೀವನಾಂಶದ ರೂಪದಲ್ಲಿ ₹5 ಸಾವಿರ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸಿ 80 ವರ್ಷ ವಯಸ್ಸಿನ ಮುನೇಶ್ ಕುಮಾರ್ ಗುಪ್ತ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಶಂಶೇರಿ ಅವರ ಎದುರು ವಿಚಾರಣೆಗೆ ಬಂದಿತ್ತು.
ವಿಚಾರಣೆಯನ್ನು ಮುಂದೂಡಿರುವ ನ್ಯಾಯಮೂರ್ತಿಯವರು, ದಂಪತಿಯು ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಬರುವಾಗ ರಚನಾತ್ಮಕವಾದ ರಾಜಿ ಸೂತ್ರವೊಂದನ್ನು ಕಂಡುಕೊಂಡಿರುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ಮುನೇಶ್ ಅವರು ಆರೋಗ್ಯ ಇಲಾಖೆಯಲ್ಲಿ ನಾಲ್ಕನೆಯ ದರ್ಜೆಯ ನೌಕರರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. 1981ರಲ್ಲಿ ತಾವು ಪತ್ನಿಯ ಹೆಸರಿನಲ್ಲಿ ಮನೆಯನ್ನು ಖರೀದಿಸಿದ್ದಾಗಿ ಅವರು ಹೇಳಿದ್ದಾರೆ. ಈ ಮನೆಯನ್ನು ಪತ್ನಿಯು ಕಿರಿಯ ಮಗನಿಗೆ ಉಡುಗೊರೆಯಾಗಿ 2008ರಲ್ಲಿ ನೀಡಿದ ನಂತರ ವಿವಾದ ಶುರುವಾಯಿತು.
ಭಿನ್ನಾಭಿಪ್ರಾಯದ ಕಾರಣಕ್ಕೆ ಮುನೇಶ್ ಅವರು ಮನೆಯನ್ನು ತೊರೆದು, ಹಿರಿಯ ಮಗನ ಜೊತೆ ಬಾಡಿಗೆ ಮನೆಯೊಂದರಲ್ಲಿ ವಾಸಿಸಲು ಆರಂಭಿಸಿದರು. ಮುನೇಶ್ ಅವರಿಂದ ತಮಗೆ ಜೀವನಾಂಶ ಸಿಗಬೇಕು ಎಂದು ಪತ್ನಿಯು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದರು. ಆಕೆಗೆ ₹5 ಸಾವಿರ ಜೀವನಾಂಶ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯ ಹೇಳಿತ್ತು.
ತಮ್ಮನ್ನು ಹಾಗೂ ಹಿರಿಯ ಮಗನನ್ನು ಬಲವಂತವಾಗಿ ಮನೆಯಿಂದ ಹೊರಹಾಕಲಾಯಿತು. ಇದಾದ ನಂತರವೂ ತಾವು ತಮ್ಮ ₹14 ಸಾವಿರ ಪಿಂಚಣಿ ಹಣದಿಂದ ಪತ್ನಿಗೆ ತಿಂಗಳಿಗೆ ₹2 ಸಾವಿರ ನೀಡುತ್ತಿದ್ದುದಾಗಿ ಮುನೇಶ್ ಹೇಳಿದ್ದಾರೆ.