ನವದೆಹಲಿ: ಅದಾನಿ ಹಗರಣ ಸೇರಿದಂತೆ ಇನ್ನಿತರೆ ಗಂಭೀರ ವಿಷಯಗಳ ಕುರಿತು ಚರ್ಚಿಸಲು ಅವಕಾಶ ನಿರಾಕರಿಸಿದ ಕಾರಣದಿಂದಾಗಿ ಸಂಸತ್ತಿನ ಉಭಯ ಸದನಗಳು ಇಂದೂ ಮುಂದೂಡಲ್ಪಟ್ಟವು ಎಂದು ಕಾಂಗ್ರೆಸ್ ಆರೋಪಿಸಿದೆ.
ಸಂಭಲ್ ಹಿಂಸಾಚಾರ ಹಾಗೂ ಅದಾನಿ ಸಮೂಹಗಳ ಹಗರಣಗಳಿಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಚರ್ಚಿಸಲು ಪ್ರತಿಪಕ್ಷಗಳು ಪಟ್ಟು ಹಿಡಿದ ಕಾರಣ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ರಾಜ್ಯ ಸಭೆಯಲ್ಲೂ ಇದೇ ವಿಷಯಗಳನ್ನು ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ಕಲ್ಪಿಸಲಿಲ್ಲ ಎಂದು ಗದ್ದಲ ಸೃಷ್ಟಿಯಾದ ಹಿನ್ನಲೆ ಸತತ ಮೂರನೇ ದಿನವೂ ಕಲಾಪ ಸ್ಥಗಿತಗೊಂಡಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಹಲವು ಕ್ಷೇತ್ರಗಳಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಪೈಪೋಟಿಯನ್ನು ಹಾಳು ಮಾಡುತ್ತಿರುವ ಮೊದಾನಿ ಹಗರಣ (ಪ್ರಧಾನಿ ಮೋದಿ ಮತ್ತು ಗೌತಮ್ ಅದಾನಿ), ಮಣಿಪುರ ಹಿಂಸಾಚಾರ ಮತ್ತು ಸಂಭಲ್ ಹಿಂಸಾಚಾರಗಳ ಕುರಿತು ವಿಸ್ತೃತ ಚರ್ಚೆಗೆ ಆಡಳಿತ ಪಕ್ಷ ಮೊಂಡುತನ ಪ್ರದರ್ಶಿಸುತ್ತಿದೆ. ಅದಾನಿ ಹಗರಣ ಜಾಗತಿಕವಾಗಿ ಭಾರತದ ಕಾರ್ಪೋರೇಟ್ ಕ್ಷೇತ್ರದ ಮೇಲೆ ವಿಶ್ವಾಸಾರ್ಹತೆಯನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.
ಭಾರತದಲ್ಲಿ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗಳ ಗುತ್ತಿಗೆಯನ್ನು ಸುಲಭವಾಗಿ ಪಡೆಯಲು ಅಧಿಕಾರಿಗಳಿಗೆ 25 ಕೋಟಿ ಡಾಲರ್ಗಳಷ್ಟು (ಅಂದಾಜು ₹2,100 ಕೋಟಿ) ಲಂಚ ನೀಡಿದ್ದಾರೆ. ಇಲ್ಲವೆ ನೀಡಲು ಮುಂದಾಗಿದ್ದಾರೆ ಎಂದು ಗೌತಮ್ ಅದಾನಿ ಹಾಗೂ ಅವರ ಅಣ್ಣನ ಮಗ ಸಾಗರ್ ಅದಾನಿ ವಿರುದ್ಧ ಅಮೆರಿಕದ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ, ಅವರ ಬಂಧನಕ್ಕೆ ಕೋರ್ಟ್ ವಾರಂಟ್ ಹೊರಡಿಸಿದೆ.




