ಢಾಕಾ: 2024ರ ಜುಲೈ ಹಾಗೂ ಆಗಸ್ಟ್ ನಡುವೆ ತಲೆದೋರಿದ ರಾಜಕೀಯ ಪ್ರಕ್ಷುಬ್ಧತೆ ಸಂದರ್ಭದಲ್ಲಿ ಜೈಲುಗಳಿಂದ ತಪ್ಪಿಸಿಕೊಂಡಿರುವ ಸುಮಾರು 700 ಕೈದಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಬಾಂಗ್ಲಾದೇಶ ಮಧ್ಯಂತರ ಸರ್ಕಾರ ಭಾನುವಾರ ತಿಳಿಸಿದೆ.'ಸುಮಾರು 700 ಕೈದಿಗಳು ಜೈಲುಗಳಿಂದ ಹೊರಗಿದ್ದಾರೆ.
ಅವರನ್ನು ಮತ್ತೆ ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ' ಎಂದು ಗೃಹ ಸಚಿವಾಲಯದ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಜಹಾಂಗೀರ್ ಅಲಂ ಚೌಧರಿ ಮಾಧ್ಯಮದವರಿಗೆ ಹೇಳಿದ್ದಾರೆ.
ಸಾಕಷ್ಟು ಮಂದಿ ಪರಾರಿಯಾಗಿದ್ದರು. ಅದರಲ್ಲಿ ಹೆಚ್ಚಿನವರನ್ನು ಬಂಧಿಸಲಾಗಿದೆ ಎಂದ ಅವರು, ನಿಖರ ಮಾಹಿತಿ ಹಂಚಿಕೊಳ್ಳಲಿಲ್ಲ. ನಾಪತ್ತೆಯಾಗಿರುವವರ ಗುರುತಿಗೆ ಸಂಬಂಧಿಸಿದ ವಿವರ ಕೇಳಿದಾಗ, ಸಮಗ್ರ ತನಿಖೆ ನಡೆಯುತ್ತಿದೆ ಎಂದಷ್ಟೇ ಹೇಳಿದ್ದಾರೆ.
ಶಿಕ್ಷೆಗೆ ಗುರಿಯಾಗಿದ್ದ ಐಎಸ್ ಉಗ್ರರು, ಮರಣದಂಡನೆ ಅನುಭವಿಸುತ್ತಿದ್ದ ಅಪರಾಧಿಗಳೂ ಸೇರಿದಂತೆ ಸುಮಾರು 700 ಕೈದಿಗಳು ನಾಪತ್ತೆಯಾಗಿದ್ದಾರೆ ಎಂದು ಜೈಲು ಅಧಿಕಾರಿಗಳು ಎರಡು ತಿಂಗಳ ಹಿಂದೆಯೇ ಬಹಿರಂಗಪಡಿಸಿದ್ದರು.
2024ರ ಆಗಸ್ಟ್ 5ರ ನಂತರ ಯಾವುದೇ ಅಪರಾಧಿಗೆ ಕ್ಷಮಾದಾನ ನೀಡಿಲ್ಲ. ಆದರೆ, ಅಧಿಕೃತವಾಗಿ ಬಿಡುಗಡೆಯಾಗಿರುವವರು ಜಾಮೀನಿನ ಮೇಲಿದ್ದಾರೆ ಎಂದು ಚೌಧರಿ ಸ್ಪಷ್ಟಪಡಿಸಿದ್ದಾರೆ.
'ಜಾಮೀನಿನ ಮೇಲೆ ಹೊರಗಿರುವವರೇನಾದರೂ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿದ್ದರೆ, ಅವರನ್ನು ಬಂಧಿಸಿ ನ್ಯಾಯಾಂಗದೆದುರು ಹಾಜರುಪಡಿಸಲಾಗುವುದು' ಎಂದು ಎಚ್ಚರಿಸಿದ್ದಾರೆ.
ದೇಶದಲ್ಲಿನ ಸದ್ಯದ ಕಾನೂನು-ಸುವ್ಯವಸ್ಥೆ ಕುರಿತು, ದೇಶದಾದ್ಯಂತ ದರೋಡೆ ಮತ್ತು ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಂತೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಹಾಗೆಯೇ, ದೇಶದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆಯೇನಿಲ್ಲ. ಆದರೆ, ಅವರೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಷ್ಟೇ ಎಂದಿದ್ದಾರೆ.
2024ರ ಜುಲೈ ಹಾಗೂ ಆಗಸ್ಟ್ ಅವಧಿಯಲ್ಲಿ ಬಾಂಗ್ಲಾದ ಹಲವು ಜೈಲುಗಳಿಂದ ಕೈದಿಗಳು ಪರಾರಿಯಾದ ಪ್ರಕರಣಗಳು ವರದಿಯಾದವು. ಢಾಕಾ ಬಳಿಕ ಕೇಂದ್ರ ನರ್ಸಿಂಗಡಿ ಜಿಲ್ಲೆಯಲ್ಲೇ 826 ಮಂದಿ ತಪ್ಪಿಸಿಕೊಂಡಿದ್ದರು.




