ಕಣ್ಣೂರು: ವಿವಾಹ ಸಮಾರಂಭದ ಹಿನ್ನೆಲೆಯಲ್ಲಿ ಭಾರಿ ಶಬ್ದದಿಂದ ಕೂಡಿದ ಪಟಾಕಿ ಸಿಡಿತದಿಂದ ನೆರೆಮನೆಯ 22ದಿವಸ ಪ್ರಾಯದ ಎಳೆಯ ಮಗು ಗಂಭೀರವಾಗಿ ಅಸೌಖ್ಯಗೊಂಡಿದ್ದು, ಪ್ರಸಕ್ತ ಮಗು ಕಣ್ಣೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದೆ.
ಕಣ್ಣೂರು ಕುನ್ನೊತ್ತ್ಪರಂಬಿಲ್ ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಕೆ.ವಿ ಅಶ್ರಫ್-ರಿಹ್ವಾನಾ ದಂಪತಿಯ ಮಗು ಗಂಭೀರವಸ್ಥೆಯಲ್ಲಿ ಆಸ್ಪತ್ರೆ ದಾಖಲಾಗಿದೆ. ಹೆರಿಗೆ ನಂತರ ತಾಯಿ ಮತ್ತು ಮಗು ಸ್ವಂತ ಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಭಾನುವಾರ ಹಾಗೂ ಸೋಮವಾರ ದಿನ ಇವರ ನೆರೆಮನೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾರೀ ಶಬ್ದದ ಪಟಾಕಿ ಸಿಡಿಸಲಾಗಿತ್ತು. ಈ ಸಂದರ್ಭ ಏಕಾಏಕಿ ಅಳುತ್ತಾ ಎಚ್ಚರಗೊಂಡಿದ್ದ ಮಗು ನಂತರ ಹದಿನೈದು ನಿಮಿಷಕ್ಕೂ ಹೆಚ್ಚುಕಾಲ ಅಬೋಧಾವಸ್ಥೆಯಲ್ಲಿದ್ದು, ಬಾಯಿಯಿಂದ ನೊರೆಹೊರಬರಲಾರಂಭಿಸಿತ್ತು. ಮೈಬಣ್ಣವೂ ಬದಲಾಗಲಾರಂಭಿಸಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಅಶ್ರಫ್ ತಿಳಿಸಿದ್ದಾರೆ. ವಿವಾಹ ಸಮಾರಂಭದ ಮರೆಯಲ್ಲಿ ಭಾರಿ ಪ್ರಮಾಣದ ಸುಡುಮದ್ದು ಸಿಡಿಸುತ್ತಿರುವುದು ನಾಗರಿಕರಿಗೆ ಭೀತಿಯನ್ನುಂಟುಮಾಡುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಕೊಳವಳ್ಳೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


