ಕಾಸರಗೋಡು: ಮಲೆನಾಡುಪ್ರದೇಶದಲ್ಲಿ ಚಿರತೆ ಭೀತಿ ಮುಂದುವರಿದಿದ್ದು, ಮಡಿಕೈ ಪ್ರದೇಶದಲ್ಲಿ ಆಟೋರಿಕ್ಷಾದಲ್ಲಿ ಸಂಚರಿಸುತ್ತಿದ್ದವರು ಚಿರತೆಯನನ್ನು ಕಂಡು ಮಾಹಿತಿ ನೀಡಿದ್ದಾರೆ. ಶುಕ್ರವಾರ ರಾತ್ರಿ 9.30ರ ವೇಳೆಗೆ ಆಟೋಚಾಲಕ ಕುಞÂರಾಮನ್ ಹಾಗೂ ಸಂಬಂಧಿ ಮಹಿಳೆಯರಿಬ್ಬರು ಆಟೋರಿಕ್ಷಾದಲ್ಲಿ ಪರಯಾಣಿಸುವ ಮಧ್ಯೆ ರಸ್ತೆಗೆ ಅಡ್ಡ ಸಂಚರಿಸಿರುವುದನ್ನು ಇವರು ಕಂಡಿದ್ದರು. ರಸ್ತೆಗೆ ಅಡ್ಡ ಸಂಚರಿಸಿದ ಚಿರತೆ ಕತ್ತಲೆಯಲ್ಲಿ ಮರೆಯಾಗಿರುವುದಾಗಿ ಕುಞÂರಾಮನ್ ತಿಳಿಸಿದ್ದಾರೆ. ಇದೇ ಪ್ರದೇಶದಲ್ಲಿ ಶನಿವಾರ ನಸುಕಿಗೆ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಟಿ. ಚಂದ್ರನ್ ರಬ್ಬರ್ ಟ್ಯಾಪಿಂಗ್ಗಾಗಿ ತೆರಳುವ ಮಧ್ಯೆ ಚಿರತೆ ಸಂಚರಿಸುತ್ತಿರುವುದನ್ನು ಕಂಡಿದ್ದು, ಜೋರಾಗಿ ಶಬ್ದ ಮಾಡಿದಾಗ ಚಿರತೆ ಮುಂದಕ್ಕೆ ಸಂಚರಿಸಿರುವುದಾಗಿ ಇವರು ತಿಳಿಸಿದ್ದಾರೆ. ನಾಲ್ಕು ದಿವಸಗಳ ಹಿಂದೆ ನೆಲ್ಲಿಯಡ್ಕ ನಿವಾಸಿ ಬಿಜು ಎಂಬವರ ಮನೆ ಸನಿಹದ ಸಾಕುನಾಯಿಯ ಗೂಡಿನ ಸನಿಹ ಚಿರತೆ ಸಂಚಾರ ಕಂಡುಬಂದಿತ್ತು.
ಚಿರತೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದಾಗಿ ಸ್ಥಳೀಯ ಜನತೆ ಅಳಲು ವ್ಯಕ್ತಪಡಿಸಿದ್ದಾರೆ. ಚಿರತೆ ಹೆಚ್ಚಿನ ಸಂಖ್ಯೆಯಲ್ಲಿ ನಾಡಿಗಿಳಿಯುತ್ತಿದ್ದಂತೆ ಕೋತಿಗಳು ಹಾಗೂ ಕಾಡುಹಂದಿಗಳ ಸಂಖ್ಯೆಯಲ್ಲಿ ಕುಸಿತವುಂಟಾಗಿರುವುದಾಗಿ ಬೋವಿಕ್ಕಾನದ ಜನತೆ ತಿಳಿಸುತ್ತಾರೆ.

