ಕೋಲ್ಕತ್ತ: ರಾಮ ಮಂದಿರ ನಿರ್ಮಾಣವಾದ ಬಳಿಕ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವ ಮೋಹನ್ ಭಾಗವತ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 'ಇದು ಇತಿಹಾಸವನ್ನು ನಾಶಗೊಳಿಸುವ ಯತ್ನ' ಎಂದಿದ್ದಾರೆ.
'ಇದು ದೇಶದ್ರೋಹ ಹೇಳಿಕೆ, ಇದನ್ನು ಖಂಡಿಸುತ್ತೇನೆ. ಈ ಹೇಳಿಕೆಯನ್ನು ಹಿಂಪಡೆಯಬೇಕು. ಇದು ಇತಿಹಾಸವನ್ನು ನಾಶಪಡಿಸುವ ಹೇಳಿಕೆ. ನಮ್ಮ ಸ್ವಾತಂತ್ರ್ಯವನ್ನು ಅಖಂಡವಾಗಿ ಉಳಿಸಿಕೊಳ್ಳಲು ನಾವು ಸಮರ್ಪಿತರಾಗಿದ್ದೇವೆ, ಭಾರತಕ್ಕಾಗಿ ನಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿದ್ದೇವೆ, ಆದರೆ ಇದನ್ನು ಸಹಿಸುವುದಿಲ್ಲ' ಎಂದಿದ್ದಾರೆ.
ಭಾಗವತ್ ಹೇಳಿದ್ದು ಏನು?
ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ದಿನವನ್ನು 'ಪ್ರತಿಷ್ಠಾ ದ್ವಾದಶಿ'ಯಾಗಿ ಆಚರಿಸಬೇಕು. ಏಕೆಂದರೆ ಹಲವಾರು ಶತಮಾನಗಳಿಂದ ಶತ್ರುಗಳ ದಾಳಿ ಎದುರಿಸಿದ ಭಾರತಕ್ಕೆ ಬಾಲರಾಮನ ಪ್ರತಿಷ್ಠಾಪನೆಯ ದಿನ 'ನಿಜವಾದ ಸಾತಂತ್ರ್ಯ' ಲಭಿಸಿತು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು.




