ನವದೆಹಲಿ: ದ್ವಿಪಕ್ಷೀಯ ಸಂಬಂಧವನ್ನು 'ಸ್ಥಿರಗೊಳಿಸಲು ಮತ್ತು ಮರುರ್ನಿರ್ಮಾಣ' ಮಾಡಲು ಕೆಲವು ಜನ-ಕೇಂದ್ರಿತ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಹಾಗೂ ಚೀನಾ ಸೋಮವಾರ ಒಪ್ಪಿದ್ದು, ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಲು ನಿರ್ಧರಿಸಿವೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಬೀಜಿಂಗ್ನಲ್ಲಿ ಚೀನಾದ ವಿದೇಶಾಂಗ ಕಾರ್ಯದರ್ಶಿ ಸುನ್ ವೀಡಾಂಗ್ ಅವರೊಂದಿಗೆ ನಡೆಸಿದ ಮಾತುಕತೆಯ ವೇಳೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
2025ರ ಬೇಸಿಗೆಯಲ್ಲಿ ಯಾತ್ರೆ ಪುನರಾರಂಭವಾಗಲಿದೆ.
ನೇರ ವಿಮಾನ ಸಂಚಾರ: 'ಉಭಯ ದೇಶಗಳ ನಡುವೆ ನೇರ ವಿಮಾನ ಸಂಚಾರವನ್ನು ಪುನರಾರಂಭಿಸಲು ಎರಡೂ ಕಡೆಯವರು ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಆರಂಭಿಸಲು ಸಂಬಂಧಪಟ್ಟ ತಾಂತ್ರಿಕ ಅಧಿಕಾರಿಗಳು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ' ಎಂದು ಹೇಳಿದೆ.
ಕೋವಿಡ್ ಹಾಗೂ ಆ ಬಳಿಕ ದ್ವಿಪಕ್ಷೀಯ ಸಂಬಂಧದಲ್ಲಿ ಬಿಕ್ಕಟ್ಟು ತಲೆದೋರಿದ ಕಾರಣ ಐದು ವರ್ಷಗಳ ಹಿಂದೆ ಉಭಯ ದೇಶಗಳ ನಡುವಿನ ನೇರ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.




