ನವದೆಹಲಿ: 'ದೇಶದ ಮಧ್ಯಮವರ್ಗದವರ ಸ್ವಂತ ಸೂರಿನ ಕನಸು ಈಡೇರಿಸಲು ಈ ಸರ್ಕಾರ ಬದ್ಧವಾಗಿದೆ' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಹೇಳಿದರು.
ಬಜೆಟ್ ಅಧಿವೇಶನ ಆರಂಭದ ದಿನದಂದು ಲೋಕಸಭೆ ಹಾಗೂ ರಾಜ್ಯಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
' ಈ ಸರ್ಕಾರದ ಮೂರನೇ ಅವಧಿಯಲ್ಲಿ ಹಿಂದಿನ ಸರ್ಕಾರಗಳಿಗಿಂತಲೂ ಮೂರು ಪಟ್ಟು ಹೆಚ್ಚು ಕೆಲಸ ಮಾಡುತ್ತಿದೆ.
70 ವರ್ಷ ಮೇಲಿನ ಆರು ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಸೌಕರ್ಯ ನೀಡುವ ಬೃಹತ್ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ನೂತನ ಶಿಕ್ಷಣ ನೀತಿ ಮೂಲಕ ಯುವ ಸಮುದಾಯಕ್ಕೆ ಉತ್ತಮ ಶಿಕ್ಷಣ ನೀಡುವುದರಿಂದ ಅವರನ್ನು ಸಶಕ್ತರನ್ನಾಗಿಸಲಾಗುತ್ತಿದೆ' ಎಂದರು.
'ವಕ್ಫ್ ಆಸ್ತಿ ಹಾಗೂ ಒಂದು ದೇಶ, ಒಂದು ಚುನಾವಣೆ ವಿಷಯದಲ್ಲೂ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿದೆ. ಮಹಿಳೆಯರ ಸಬಲೀಕರಣಕ್ಕೆ ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಯೋಜನೆಯಡಿ 91 ಲಕ್ಷ ಸ್ವಸಹಾಯ ಗುಂಪುಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಬ್ಯಾಂಕಿಂಗ್ ಮತ್ತು ಡಿಜಿ ಪಾವತಿ ಮೂಲಕ ಗ್ರಾಮೀಣ ಭಾಗದ ಜನರನ್ನೂ ದೇಶದ ಆರ್ಥಿಕ ವ್ಯವಸ್ಥೆಯೊಳಗೆ ತರಲಾಗಿದೆ' ಎಂದರು.
'ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯಿಂದ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಬದಲಾಗಿದೆ. ಅಷ್ಟಲಕ್ಷ್ಮಿ ಕಾರ್ಯಕ್ರಮದ ಮೂಲಕ ಈಶಾನ್ಯ ರಾಜ್ಯಗಳ ಪರಕೀಯ ಭಾವನೆಯನ್ನು ಹೋಗಲಾಡಿಸಲು ಪ್ರಯತ್ನಿಸಲಾಗಿದೆ. ಪ್ರಾಕೃತ, ಪಾಲಿ, ಮರಾಠಿ, ಬಂಗಾಳಿ ಹಾಗೂ ಅಸ್ಸಾಮಿ ಭಾಷೆಗಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ' ಎಂದರು.
'ಭಾರತವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿರತೆ ಹೊಂದುವ ಮೂಲಕ ಜಗತ್ತಿಗೇ ಮಾದರಿಯಾಗಿದೆ. ಸುಧಾರಣೆ, ಆಚರಣೆ ಮತ್ತು ಪರಿವರ್ತನೆ ಎಂಬುದು ದೇಶದ ಆಡಳಿತದ ಮೂರು ಪ್ರಬಲ ಆಧಾರಸ್ತಂಭಗಳು. ದೇಶದ ಗಡಿಯನ್ನು ಭದ್ರಗೊಳಿಸುವಲ್ಲಿ ಸರ್ಕಾರವು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಇದೇ ವೇಳೆಗೆ ಎಡಪಂಥೀಯ ತೀವ್ರವಾದಿಗಳನ್ನು ಹತ್ತಿಕ್ಕುವ ಪ್ರಯತ್ನ ಚುರುಕುಗೊಳಿಸಲಾಗಿದೆ. ಇದರಿಂದ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 38ಕ್ಕೆ ಕುಸಿದಿದೆ' ಎಂದು ಮುರ್ಮು ಹೇಳಿದರು.




