ನವದೆಹಲಿ: ದೇಶದಲ್ಲಿ ಜಾತ್ಯತೀತತೆಯನ್ನು ರಕ್ಷಿಸುವ ಸಲುವಾಗಿ 'ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ-1991'ರ ಅಗತ್ಯವಿದೆ ಎಂದು ಕಾಂಗ್ರೆಸ್ ಪಕ್ಷ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಈ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿರೋಧಿಸಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಮಧ್ಯಂತರ ಮೇಲ್ಮನವಿಯಲ್ಲಿ ಪಕ್ಷವು ಈ ಪ್ರತಿಪಾದನೆ ಮಾಡಿದೆ.
'ಈ ಕಾಯ್ದೆಯನ್ನು ಸಂಸತ್ ರೂಪಿಸಿದ್ದು, ಇದು ಜಾತ್ಯತೀತತೆ ಕುರಿತ ಭಾರತೀಯರ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ' ಎಂದೂ ಹೇಳಿದೆ.
'ಜಾತ್ಯತೀತ ತತ್ವಗಳನ್ನು ಬುಡಮೇಲು ಮಾಡುವ ದುರುದ್ದೇಶಪೂರಿತ ಪ್ರಯತ್ನದ ಭಾಗವಾಗಿ ಈ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಕಾಯ್ದೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿದರೂ ಅದು ದೇಶದ ಕೋಮು ಸೌಹಾರ್ದ ಹಾಗೂ ಜಾತ್ಯತೀತತೆಯನ್ನು ಸಂಕಷ್ಟಕ್ಕೆ ದೂಡುತ್ತದೆ. ಆ ಮೂಲಕ, ದೇಶದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಬೆದರಿಕೆ ಒಡ್ಡುತ್ತದೆ' ಎಂದು ಕಾಂಗ್ರೆಸ್ ತನ್ನ ಅರ್ಜಿಯಲ್ಲಿ ಹೇಳಿದೆ.
ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಅರ್ಜಿಯನ್ನು ಸಾರಾಸಗಟಾಗಿ ತಿರಸ್ಕರಿಸುವಂತೆಯೂ ಕೋರಿದೆ.
ಅರ್ಜಿಯ ಪ್ರಮುಖ ಅಂಶಗಳು
ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯು ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಮೂಲಭೂತ ಹಕ್ಕುಗಳಿಗೆ ವ್ಯತಿರಿಕ್ತವಾಗಿ ಇಲ್ಲ
ಸಂವಿಧಾನದ 25 26 27 ಹಾಗೂ 28ನೇ ವಿಧಿಗಳಲ್ಲಿ ಹೇಳಿರುವಂತೆ ಜಾತ್ಯತೀತ ತತ್ವಗಳ ಪಾಲನೆ ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಈ ಕಾಯ್ದೆ ಎತ್ತಿ ಹಿಡಿಯುತ್ತದೆ
ದೇಶದ ಎಲ್ಲ ಸಮುದಾಯಗಳ ನಡುವೆ ಸೌಹಾರ್ದಯುತ ಸಂಬಂಧ ಉತ್ತೇಜಿಸುವುದಕ್ಕಾಗಿ ಈ ಕಾಯ್ದೆ ಅಗತ್ಯವಿದೆ




.jpg)
