HEALTH TIPS

ThinkEdu Conclave 2025: ಸಂಸತ್‌ನಲ್ಲಿ ಚರ್ಚೆಯ ಗುಣಮಟ್ಟ ಕುಸಿತ, ಕಲಾಪಕ್ಕೆ ಆಗಾಗ ಅಡ್ಡಿ- ಶಶಿ ತರೂರ್

ಚೆನ್ನೈ: ಭಾರತೀಯ ಸಂಸತ್ತಿನಲ್ಲಿ ಚರ್ಚೆಗಳು ಮತ್ತು ಕಲಾಪಗಳ ಗುಣಮಟ್ಟ ಕುಸಿತ ಕಾಣುತ್ತಿದೆ ಎಂದು ಕಾಂಗ್ರೆಸ್ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಸೋಮವಾರ ಹೇಳಿದ್ದಾರೆ.

ಚೆನ್ನೈನ ThinkEdu Conclave ನಲ್ಲಿ ಭಾರತದ ಸಂಸದೀಯ ಕಲಾಪಗಳ ಕುರಿತು ಹಿರಿಯ ಪತ್ರಕರ್ತೆ ಕಾವೇರಿ ಬಾಮ್‌ಜಾಯ್ ಅವರೊಂದಿಗೆ ನಡೆಸಿದ ಸಂವಾದದಲ್ಲಿ, ಸಂಸತ್ತಿಗಿಂತ ಜನರೊಂದಿಗೆ ಮಾತುಕತೆ ನಡೆಸುವುದು ಹೆಚ್ಚು ಲಾಭದಾಯಕ ಎಂದ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಪ್ರತಿಪಕ್ಷಗಳ ಅಭಿಪ್ರಾಯಗಳು ಮುಖ್ಯವಲ್ಲ ಎಂದು ಹೇಳಿದರು.

ಯುಪಿಎ ಅಧಿಕಾರದಲ್ಲಿದ್ದಾಗ ಪ್ರಮುಖ ವಿಧೇಯಕಗಳನ್ನು ಅಂಗೀಕರಿಸುವಾಗಲೂ ವಿರೋಧ ಪಕ್ಷದ ನಾಯಕರ ಅಭಿಪ್ರಾಯಗಳನ್ನು ಪರಿಗಣಿಸಲಾಗುತ್ತಿತ್ತು. ಆದರೆ, ಇದೀಗ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ 'ನಂಬಿಕೆ ಮತ್ತು ಸಂವಹನವು ಸಂಪೂರ್ಣ ಸ್ಥಗಿತ'ಗೊಂಡಿದೆ ಎಂದು ತರೂರ್ ಹೇಳಿದರು.

ಇಂದು ಚರ್ಚೆಯ ಗುಣಮಟ್ಟ ಕುಸಿದಿದೆ ಮತ್ತು ಆಗಾಗ್ಗೆ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಸಂಸತ್ತನ್ನು ಕುಳಿತುಕೊಳ್ಳಲು ಮತ್ತು ಕೆಲಸ ಮಾಡಲು ನಿರಾಶಾದಾಯಕ ಸ್ಥಳವನ್ನಾಗಿ ಮಾಡಲಾಗಿದೆ. ಸಂಸತ್ತು ಈಗ 'ಪ್ರಜಾಪ್ರಭುತ್ವದ ಮಂದಿರ' ಎಂಬ ಅರ್ಥವನ್ನು ಕಳೆದುಕೊಂಡಿದೆ' ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿಗೆ ಅಷ್ಟೇನೂ ಹಾಜರಾಗುವುದಿಲ್ಲ ಮತ್ತು ಅವರು ಉಸ್ತುವಾರಿ ವಹಿಸಿರುವ ಸಚಿವಾಲಯಗಳಿಗೆ ಸಂಬಂಧಿಸಿದಂತೆ ಕೇಳುವ ಪ್ರಶ್ನೆಗಳಿಗೆ ರಾಜ್ಯ ಸಚಿವ (ಜಿತೇಂದ್ರ ಸಿಂಗ್) ಉತ್ತರಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ನೂತನ್ ಸಂಸತ್ ಕಟ್ಟಡದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಆತ್ಮರಹಿತ ಕನ್ವೆನ್ಷನ್ ಹಾಲ್' ಅನ್ನು ಹೋಲುತ್ತದೆ ಮತ್ತು ಆಕರ್ಷಣೆಯನ್ನು ಹೊಂದಿಲ್ಲ. ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಪಕ್ಷವು ವಿರೋಧ ಪಕ್ಷಗಳನ್ನು ಎದುರಾಳಿಗಳಾಗಿ ನೋಡಬೇಕು. ಆದರೆ, ಸದ್ಯದ ಸನ್ನಿವೇಶದಲ್ಲಿ ವಿಪಕ್ಷದ ಸಂಸದರಿಗೆ 'ದೇಶ ವಿರೋಧಿ' ಮತ್ತು 'ದೇಶದ್ರೋಹ' ಪದಗಳನ್ನು ಬಳಸಲಾಗುತ್ತಿದೆ. ಪ್ರತಿಪಕ್ಷಗಳ ಸಂಸದರನ್ನು ವಿರೋಧಿಗಳಾಗಿ ನೋಡುವ ಬದಲು ಶತ್ರುಗಳಂತೆ ನೋಡಲಾಗುತ್ತಿದೆ' ಎಂದು ದೂರಿದರು.

ಬಿಜೆಪಿ ಸಂಸದರು ವಿಶೇಷವಾಗಿ ಕೆಲವು ವಿಚಾರಗಳ ಬಗ್ಗೆ ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಮರ್ಥರಾಗಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ, ಪ್ರತಿಪಕ್ಷದ ಸಹೋದ್ಯೋಗಿಗಳೊಂದಿಗೆ ಬೆರೆಯಲು ಈಗಿನ ಬಿಜೆಪಿ ಸಂಸದರು ಮತ್ತು ಸಚಿವರು ನಿರಾಕರಿಸುತ್ತಿದ್ದಾರೆ. ಯುಪಿಎ ಆಡಳಿತಾವಧಿಯಲ್ಲಿ ಈ ರೀತಿ ಇರಲಿಲ್ಲ. ಬಿಜೆಪಿ ನಾಯಕರು ವಿರೋಧ ಪಕ್ಷದ ಬೆಂಚ್‌ಗಳಲ್ಲಿ ಕುಳಿತಿದ್ದಾಗ ಇದು ಕಾನೂನುಬದ್ಧ ಅಧಿಕಾರ ಎಂದು ವಾದಿಸುತ್ತಿದ್ದರು. ಆದರೆ, ಆದರೆ ಅದೇ ಪಕ್ಷ ಅಧಿಕಾರಕ್ಕೆ ಬಂದ ನಂತರ ವಿಪಕ್ಷಗಳ ನಾಯಕರಿಗೆ ಅಡ್ಡಿಪಡಿಸುತ್ತಿದೆ ಎಂದು ತಿಳಿಸಿದರು.

ವಿರೋಧ ಪಕ್ಷದ ಸಂಸದರ ಮೈಕ್‌ಗಳನ್ನು ಆಫ್ ಮಾಡುವ ಮತ್ತು ಉಭಯ ಸದನಗಳ ಮುಖ್ಯಸ್ಥರ ನಡವಳಿಕೆ ಕುರಿತು ಬಾಮ್ಜಾಯ್ ಅವರ ಪ್ರಶ್ನೆಗೆ ಉತ್ತರಿಸಿದ ತರೂರ್, ಇದು ನಿಜ ಮತ್ತು ಅಧ್ಯಕ್ಷರೊಂದಿಗಿನ ಸಂಬಂಧವು ಖಂಡಿತವಾಗಿಯೂ ಹದಗೆಟ್ಟಿದೆ. ಅಧ್ಯಕ್ಷರು ತಮ್ಮನ್ನು ಅಧ್ಯಕ್ಷರಾಗಿ ನೋಡಬೇಕು ಮತ್ತು ತಮ್ಮ ರಾಜಕೀಯ ಪೂರ್ವಾಗ್ರಹಗಳನ್ನು ತೊಡೆದುಹಾಕಬೇಕು. ಆದರೆ, ಬಹುಶಃ ಅವರು ಸರ್ಕಾರದಿಂದ ಸೂಚನೆಗಳನ್ನು ಪಡೆದಿರುವುದರಿಂದ ಅದು ಕಷ್ಟವಾಗಬಹುದು ಎಂದು ಒಪ್ಪಿಕೊಂಡರು.

ತರೂರ್ ಎರಡು ಪ್ರಮುಖ ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಒಂದು ಬಿಜೆಪಿ ಸರ್ಕಾರವನ್ನು 'ಸೂಟ್-ಬೂಟ್ ಕಿ ಸರ್ಕಾರ್' ಎಂದು ಕರೆಯುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾಡಿದ ಭಾಷಣದ ವೇಳೆ ಆಡಳಿತ ಪಕ್ಷವು ಮೈಕ್ ಆಫ್ ಮಾಡಿತು. ಮತ್ತೊಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರ ಉಚ್ಚಾಟನೆಯ ಸಂದರ್ಭದಲ್ಲಿ ಆಕೆಯ ಭಾಷಣವನ್ನು ಮೊಟಕುಗೊಳಿಸಲಾಯಿತು ಎಂದು ತಿಳಿಸಿದರು.

ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ತರೂರ್, ಸಂಸತ್ತಿನ ಕಲಾಪಗಳಿಗೆ ಉಂಟಾಗುತ್ತಿರುವ ಅಡೆತಡೆಗಳನ್ನು ಹೇಗೆ ನಿವಾರಿಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಲು ಮುಕ್ತವಾಗಿದ್ದೇನೆ. ಸಂಸತ್ತಿನಲ್ಲಿ ಚರ್ಚೆಗಳಿಗೆ ಅಜೆಂಡಾ ನಿಗದಿಪಡಿಸಲು ಪ್ರತಿಪಕ್ಷಗಳಿಗೆ ನಿರ್ದಿಷ್ಟವಾಗಿ ವಾರದ ಒಂದು ದಿನವನ್ನು ಮೀಸಲಿಡಬೇಕು. ಇದು ವಾರದ ಇತರ ದಿನಗಳಲ್ಲಿ ಸುಗಮ ಕಾರ್ಯನಿರ್ವಹಣೆಗೆ ನೆರವಾಗುತ್ತದೆ. ಆದರೆ, ಸದ್ಯದ ಸರ್ಕಾರವು ಪ್ರತಿಪಕ್ಷಗಳ ಸಲಹೆಗಳನ್ನು ಸ್ವೀಕರಿಸಲು ಸಿದ್ಧವಿಲ್ಲದ ಕಾರಣ ಇದು ಆಗುವ ಸಾಧ್ಯತೆಯಿಲ್ಲ. ಅವರು ತಮಗೆ ಬೇಕಾದ ದಾರಿಯಲ್ಲಿ ಹೋಗುತ್ತಿರುವಾಗ ಇದನ್ನು ಸುಧಾರಿಸುವ ಗೋಜಿಗೆ ಏಕೆ ಹೋಗುತ್ತಾರೆ' ಎಂದು ತರೂರ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries