ಕಾಸರಗೋಡು: ನವ ಕೇರಳ ಸೃಷ್ಟಿ ಎಂಬುದು ಸಾರ್ವಜನಿಕ ಯೋಜನಾ ಚಟುವಟಿಕೆಗಳ ಮುಂದುವರಿದ ಭಾಗವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಅವರು ಭಾನುವಾರಕಾಸರಗೋಡು ಜಿಲ್ಲಾ ಪಂಚಾಯಿತಿಯ ನೂತನ ಅನೆಕ್ಸ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಜನಕೀಯ ಯೋಜನೆ 25ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯಚಟುವಟಿಕೆ ಹಾಗೂ ಕಟ್ಟಡಗಳಲ್ಲೂ ಬದಲಾವಣೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿಗೆ ಹೊಸ ಕಟ್ಟಡ ಸಿದ್ಧಗೊಂಡಿದೆ. ದೇಶದ ಒಟ್ಟಾರೆ ಅಭಿವೃದ್ಧಿ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಅಧಿಕಾರ ತಳಮಟ್ಟಕ್ಕೆ ತಲುಪಿಸುವುದರ ಜತೆಗೆ ಆಯಾ ಪ್ರದೆಶದ ಗುಣಲಕ್ಷಣಗಳಿಗನುಗುಣವಾಗಿ ಮೂಲಸೌಕರ್ಯ ಒದಗಿಸಿ ಕೊಟ್ಟಿರುವುದರಿಂದ ಕೇರಳದಲ್ಲಿ ಜನಕೀಯ ಯೋಜನೆ ಅತ್ಯಂತ ಯಶಸ್ಸು
ಕಾಣಲು ಸಾಧ್ಯವಾಗಿದೆ. ಡಿಜಿಟಲ್ ಸಾಕ್ಷರತೆ ಸಾಧಿಸಲು ಕಾಸರಗೋಡು ಜಿಲ್ಲಾ ಪಂಚಾಯಿತಿ ನಡೆಸಿರುವ ಚಟುವಟಿಕೆ ಮಾದರಿಯಾಗಿದ್ದು, ಇದರ ಗುರಿ ಸಾಧಿಸಲು ವಾರ್ಡ್ ಮಟ್ಟದಲ್ಲಿ250ಕ್ಕೂ ಹೆಚ್ಚು ತರಗತಿಗಳನ್ನು ಆಯೋಜಿಸಿರುವುದು ಶ್ಲಾಘನೀಯ. ಜಿಲ್ಲೆಯ ಎಲ್ಲಾ ಜನರಿಗೂ ಕುಡಿಯುವ ನೀರು ಲಭ್ಯವಾಗುವಂತೆ ಮಾಡಲು ಎಂಟು ಕೋಟಿ ರೂಪಾಯಿ ವೆಚ್ಚ ಮಾಡಿ ಜಲ ಬಜೆಟ್ ಸಿದ್ಧಪಡಿಸಿರುವ ಕಾಸರಗೋಡು ಜಿಲ್ಲಾ ಪಂಚಾಯಿತಿ ಶ್ರಮ ಅಭಿನಂದನಾರ್ಹ ಎಂದು ಮುಖ್ಯಮಂತ್ರಿ ತಿಳಿಸಿದರು.
ನೋಂದಣಿ ಮ್ಯೂಸಿಯಂ ಮತ್ತು ಪುರಾತತ್ವ ಖಾತೆ ಸಚಿವ ಗಡನಪಲ್ಲಿ ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಶಿಲ್ಪಿ ಕಾನಾಯಿ ಕುಞÂರಾಮನ್ ಅವರನ್ನು ಗೌರವಿಸಲಾಯಿತು. ಜಿಲ್ಲೆಯ ಸಾಮಾಜಿಕ-ಆರ್ಥಿಕ ವರದಿಯನ್ನು ಬಿಡುಗಡೆ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಜ್ ಪಾದೂರು ಮುಖ್ಯಮಂತ್ರಿಯನ್ನು ಗೌರವಿಸಿದರು.
ದರ್ಪಣಂ ಯೋಜನೆಯ ಮಹಿಳಾ ಫಲಾನುಭವಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಪ್ರಮಾಣಪತ್ರವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ವಿತರಿಸಿದರು. ಮಾನ್ಯತೆ ಪಡೆದ ಗ್ರಂಥಾಲಯಗಳಿಗೆ ಪುಸ್ತಕ ಪೀಠೋಪಕರಣಗಳನ್ನು ಶಾಸಕ ಎನ್.ಎ ನೆಲ್ಲಿಕುನ್ನು ಹಾಗೂ ಅಂಗವಿಕಲರಿಗಿರುವ ಸಹಾಯವನ್ನು ಶಾಸಕ ಎಂ.ರಾಜಗೋಪಾಲನ್, ಕುಟುಂಬಶ್ರೀ ತಂಡಗಳಿಗಿರುವ ಸಹಾಯಧನವನ್ನು ಶಾಸಕ ಇ.ಚಂದ್ರಶೇಖರನ್ ಹಾಗೂ ಅತ್ಯುತ್ತಮ ಬಿಎಂಸಿ ಪ್ರಕಟಣೆಯನ್ನು ಶಾಸಕ ಸಿಎಚ್. ಕುಞಂಬು ನಿರ್ವಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿರುವ ಹಸಿರು ಗ್ರಾಮ ಪಂಚಾಯಿತಿ ಘೋಷಣೆಯನ್ನು ಜಿಲ್ಲಾಧಿಕಾರಿ ಇಂಪಾಶೇಖರ್ ನೆರವೇರಿಸಿದರು.\ಜನಪ್ರತಿನಿಧೀಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಸ್ವಾಗತಿಸಿದರು. ಹಣಕಾಸು ಅಧಿಕಾರಿ ಎಂ.ಎಸ್.ಶಬರೀಶ್ ವಂದಿಸಿದರು.





