HEALTH TIPS

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು ಹೇಗೆ?

ನವದೆಹಲಿ: 'ಪ್ರಯಾಗ್‌ರಾಜ್‌ಗೆ ತೆರಳುವ ರೈಲುಗಳು ವಿಳಂಬವಾದ ಕಾರಣ ದೆಹಲಿ ರೈಲು ನಿಲ್ದಾಣದಲ್ಲಿ ಜನಸಂದಣಿ ಉಂಟಾಗಿತ್ತು. ಇದರಿಂದ ನೂಕುನುಗ್ಗಲು ಉಂಟಾಗಿ ಹಲವರು ಉಸಿರುಗಟ್ಟಿ ಮೂರ್ಛೆ ಹೋಗಿದ್ದರು' ಎಂದು ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದು ಹೀಗೆ..

'ಪ್ಲಾಟ್‌ಫಾರ್ಮ್‌ ಸಂಖ್ಯೆ 12,13,14ರಲ್ಲಿ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು. ಸ್ವತಂತ್ರ ಸೇನಾನಿ ಮತ್ತು ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ವಿಳಂಬವಾಗಿತ್ತು. ಸಿಎಂಐ ಪ್ರಕಾರ, ಗಂಟೆಗೆ 1,500 ಸಾಮಾನ್ಯ ಬೋಗಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದರಿಂದಾಗಿ ನಿಲ್ದಾಣದಲ್ಲಿ ಜನ ಕಿಕ್ಕಿರಿದು ತುಂಬಿದ್ದರು, ಜನರನ್ನು ನಿಯಂತ್ರಿಸಲಾಗಲಿಲ್ಲ. ಪ್ಲಾಟ್‌ಫಾರ್ಮ್‌ ಸಂಖ್ಯೆ 14 ಮತ್ತು 16ರ ಎಸ್ಕಲೇಟರ್‌ ಬಳಿ ರಾತ್ರಿ 9.55ರ ಹೊತ್ತಿಗೆ ನೂಕು ನುಗ್ಗಲು ಉಂಟಾಯಿತು. ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು' ಎಂದು ಉಪ ಪೊಲೀಸ್‌ ಆಯುಕ್ತ ಮಾಹಿತಿ ನೀಡಿದ್ದಾರೆ.

ಈವರೆಗೆ ಕಾಲ್ತುಳಿದಲ್ಲಿ 18 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಲೋಕ ನಾಯಕ ಜೈ ಪ್ರಕಾಶ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಂಗಾಮಿ ಮುಖ್ಯಮಂತ್ರಿ ಆತಿಶಿ ತಿಳಿಸಿದ್ದಾರೆ.

'ನಾನು ಪ್ರಯಾಗ್‌ರಾಜ್‌ಗೆ ಹೊರಟಿದ್ದೆ, ಆದರೆ ಹಲವು ರೈಲುಗಳು ತಡವಾಗಿ ಬರುತ್ತಿದ್ದವು, ಇನ್ನೂ ಕೆಲವು ರದ್ದಾಗಿದ್ದವು. ರೈಲು ನಿಲ್ದಾಣವು ಕಿಕ್ಕಿರಿದು ತುಂಬಿತ್ತು. ನಿಲ್ದಾಣದಲ್ಲಿ ಈ ಹಿಂದೆ ನೋಡಿದ್ದಕ್ಕಿಂತ ಹೆಚ್ಚು ಜನರು ಇದ್ದರು. ನನ್ನ ಮುಂದೆಯೇ, ಆರೇಳು ಮಹಿಳೆಯರನ್ನು ಸ್ಟ್ರೆಚರ್‌ಗಳಲ್ಲಿ ಕರೆದೊಯ್ಯಲಾಯಿತು' ಎಂದು ಧರ್ಮೇಂದ್ರ ಸಿಂಗ್‌ ಎನ್ನುವ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

'ನನ್ನ ಬಳಿ ಪುರುಷೋತ್ತಮ್ ಎಕ್ಸ್‌ಪ್ರೆಸ್‌ನ ಸ್ಲೀಪರ್-ಕ್ಲಾಸ್ ಟಿಕೆಟ್ ಇತ್ತು. ಆದರೆ ದೃಢಪಡಿಸಿದ ಟಿಕೆಟ್‌ಗಳನ್ನು ಹೊಂದಿರುವವರು ಸಹ ರೈಲು ಹತ್ತಲು ಸಾಧ್ಯವಾಗಲಿಲ್ಲ. ನನ್ನ ಸ್ನೇಹಿತರೊಬ್ಬರು ಪ್ರಯಾಣಿಕರ ಗುಂಪಿನಲ್ಲಿ ಸಿಲುಕಿಕೊಂಡರು. ನಾವು ನಮ್ಮ ಮಕ್ಕಳೊಂದಿಗೆ ರೈಲು ನಿಲ್ದಾಣದ ಹೊರಗೆ ಕಾಯುತ್ತಿದ್ದೆವು' ಎಂದು ಇನ್ನೊಬ್ಬ ಪ್ರಯಾಣಿಕ ಪ್ರಮೋದ್‌ ಚೌರಾಸಿಯಾ ಘಟನೆ ಬಗ್ಗೆ ವಿವರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries