ಮುಂಬೈ: ಅಶ್ಲೀಲ ಹೇಳಿಕೆ ನೀಡಿದ ಸಂಬಂಧ ತನಿಖೆ ಎದುರಿಸುತ್ತಿರುವ ಪಾಡ್ಕಾಸ್ಟರ್ ರಣವೀರ್ ಅಲಹಾಬಾದಿಯಾ ಅವರ ಫ್ಲ್ಯಾಟ್ಗೆ ಬೀಗ ಹಾಕಿದ್ದು, ಮೊಬೈಲ್ ಸ್ವಿಚ್ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'India Got Latent' ಶೋನಲ್ಲಿ ಭಾಗವಹಿಸಿದ್ದ ವೇಳೆ ರಣವೀರ್, ಪೋಷಕರು ಮತ್ತು ಲೈಂಗಿಕತೆ ವಿಚಾರವಾಗಿ ಅಶ್ಲೀಲವಾಗಿ ಮಾತನಾಡಿದ್ದರು.
ಪ್ರಕರಣ ಸಂಬಂಧ ಫೆ.13ರಂದು ತನಿಖೆಗೆ ಹಾಜರಾಗುವಂತೆ ರಣವೀರ್ಗೆ ಖಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಸಮನ್ಸ್ ನೀಡಿದ್ದರು. 'ಮಾಧ್ಯಮಗಳ ಎದುರು ಬರಲು ಭಯವಾಗುತ್ತದೆ' ಎಂಬ ಕಾರಣ ನೀಡಿ ತನಿಖೆಗೆ ಗೈರಾಗಿದ್ದರು. ಅಲ್ಲದೇ ಮನೆಗೆ ಬಂದು ಹೇಳಿಕೆ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದರು.
ರಣವೀರ್ ಮನವಿಯನ್ನು ನಿರಾಕರಿಸಿದ್ದ ಪೊಲೀಸರು ಫೆ.14ರಂದು ತನಿಖೆ ಎದುರಿಸುವಂತೆ ತಿಳಿಸಿದ್ದರು. ಆದರೆ ಶುಕ್ರವಾರವೂ ರಣವೀರ್ ತನಿಖೆಗೆ ಹಾಜರಾಗಿರಲಿಲ್ಲ.
ಮುಂಬೈನ ವೆರ್ಸೋವಾ ಪ್ರದೇಶದಲ್ಲಿರುವ ಅವರ ಫ್ಲ್ಯಾಟ್ಗೆ ಪೊಲೀಸರು ಭೇಟಿ ನೀಡಿದ ವೇಳೆ ಬೀಗ ಹಾಕಿರುವುದು ಕಂಡುಬಂದಿದೆ. ಫೋನ್ ಸ್ವಿಚ್ಆಫ್ ಮಾಡಿಕೊಂಡಿದ್ದರಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿರುವ ಸಮಯ್ ರೈನಾ ಪರ ವಕೀಲರು, ತಮ್ಮ ಕಕ್ಷಿದಾರ ಅಮೆರಿಕದಲ್ಲಿರುವುದರಿಂದ ತನಿಖೆಗೆ ಹಾಜರಾಗಲು ಹೆಚ್ಚಿನ ಸಮಯ ನೀಡುವಂತೆ ಕೋರಿದ್ದಾರೆ. ವಕೀಲರ ಮನವಿ ಮೇರೆಗೆ ಮಾರ್ಚ್ 10ರ ಒಳಗೆ ತನಿಖೆ ಎದುರಿಸುವಂತೆ ಸೂಚಿಸಿದ್ದಾರೆ.
ಪ್ರಕರಣ ಸಂಬಂಧ ಇದುವೆರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂಟು ಜನರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.






